ದೊಡ್ಡಬಳ್ಳಾಪುರ: ತಾಲ್ಲೂಕಿನ ಕೆಳಗಿನಜೂಗಾನಹಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ಹೂವಿನ ಬೆಳೆಗೆ ಅಳವಡಿಸಿದ್ದ ಡ್ರಿಪ್ಪೈಪ್ ಹಾಗೂ ಸೇವಂತಿಗೆ ಹೂವಿನ ಸಸಿಗಳನ್ನು ದುಷ್ಕರ್ಮಿಗಳು ಕಿತ್ತು ನಾಶಪಡಿಸಲಾಗಿದೆ.
ಗ್ರಾಮದ ರೈತ ಗಂಗಪ್ಪ ಅವರು ತಮ್ಮ ಜಮೀನಿನಲ್ಲಿ ಒಂದು ತಿಂಗಳ ಹಿಂದೆಯಷ್ಟೇ ಸಾವಿರಾರು ರೂಪಾಯಿ ಖರ್ಚು ಮಾಡಿ ಸೇವಂತಿಗೆ, ಬಟಾನ್ಸ್ ಹೂವಿನ ಸಸಿ ನಾಟಿ ಮಾಡಿದ್ದರು. ಈ ಭಾಗದಲ್ಲಿ ಚಿರತೆ ಕಾಟಕ್ಕೆ ಹೆದರಿ ರಾತ್ರಿ ಮನೆಯಿಂದ ತಡವಾಗಿ ಗಂಗಪ್ಪ ಅವರು ತೋಟದ ಬಳಿ ಬಂದಿದ್ದಾರೆ. ಕಿಡಿಗೇಡಿಗಳು ಉದ್ದೇಶಪೂರಕವಾಗಿಯೇ ಹೂವಿನ ಬೆಳೆಗೆ ಹಾಕಿದ್ದ ಹನಿ ನೀರಾವರಿಯ ಪೈಪ್ಗಳನ್ನು ಅಲ್ಲಲ್ಲಿ ಹೊಡೆದು, ಕಿತ್ತು ಹಾಕಿದ್ದಾರೆ. ಹೂವಿನ ಸಸಿಗಳನ್ನು ನಾಶಪಡಿಸಿದ್ದಾರೆ.
ಗಂಗಪ್ಪ ಅವರ ತೋಟದಲ್ಲೇ ಇತ್ತೀಚೆಗಷ್ಟೇ ಪಂಪ್, ಮೋಟರ್ ಹಾಗೂ ಕೇಬಲ್ ಕಳವಾಗಿತ್ತು. ಇದೀಗ ಡ್ರಿಪ್ ಪೈಪ್, ಸೇವಂತಿ ಸಸಿ ನಾಶ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಜೊತೆಗೆ ಕಿಡಿಗೇಡಿಗಳ ಈ ಕೃತ್ಯದಿಂದಾಗಿ ತೋಟದಲ್ಲಿ ಉಳಿದುಕೊಳ್ಳಲು ಭೀತಿ ಎದುರಾಗಿದೆ. ಈ ಸಂಬಂಧ ಅವರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.