ದೊಡ್ಡಬಳ್ಳಾಪುರ: ರಾಜ್ಯದಲ್ಲೇ ಅತಿ ಹೆಚ್ಚು ಕಂದಾಯ ಕೋರ್ಟ್ ಪ್ರಕರಣಗಳನ್ನು ಇತ್ಯರ್ಥ ಪಡಿಸುವ ಮೂಲಕ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಕಚೇರಿ ಮುಂಚೂಣಿಯಲ್ಲಿದೆ.
ಈ ಬಗ್ಗೆ ಮಾಹಿತಿ ನೀಡಿರುವ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಎಂ.ಶ್ ರೀನಿವಾಸ್, 2023ರ ಜೂನ್ ತಿಂಗಳಿಂದ 2024ರ ಜೂನ್ 28ಕ್ಕೆ 1,317 ಪಹಣಿ ತಿದ್ದುಪಡಿ, 3,366 ಕಂದಾಯ ಕೋರ್ಟ್ ಪ್ರಕರಣ ಹಾಗೂ ಸರ್ವೇ ಇಲಾಖೆಯ 2,000 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ.
ಪಹಣಿಯಲ್ಲಿನ ಸಣ್ಣ ಪುಟ್ಟ ತಿದ್ದುಪಡಿಗಳಿಗಾಗಿ ರೈತರು ಕಚೇರಿಗೆ ಅಲೆದಾಡುವುದು ತಪ್ಪಿದಂತಾಗಿದೆ. ಪಹಣಿಯಲ್ಲಿನ ಕಲಂ 3 ಮತ್ತು 9ರಲ್ಲಿ ವಿಸ್ತೀರ್ಣ ತಪ್ಪಾಗಿರುವ ಪ್ರಕರಣಗಳ ಸಂಖ್ಯೆಯೇ ಜಿಲ್ಲೆಯಲ್ಲಿ 4,276 ಇವೆ. ಇವುಗಳ ಸೂಕ್ತ ದಾಖಲಾತಿ ಪರಿಶೀಲಿಸಿ ಒಂದು ವರ್ಷದಲ್ಲಿ 1,317 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ರೈತರು ಪ್ರಕರಣಗಳ ಇತ್ಯರ್ಥಕ್ಕೆ ದೊಡ್ಡಬಳ್ಳಾಪುರದಲ್ಲಿನ ಉಪವಿಭಾಗಾಧಿಕಾರಿ ಕಚೇರಿಗೆ ಬರುವುದನ್ನು ತಪ್ಪಿಸುವ ಸಲುವಾಗಿ ಪ್ರತಿ ಮಂಗಳವಾರ ನೆಲಮಂಗಲ, ಪ್ರತಿ ಗುರುವಾರ ಹೊಸಕೋಟೆ ತಾಲ್ಲೂಕು ಕಚೇರಿಯಲ್ಲಿಯೇ ವಿಚಾರಣೆ ನಡೆಸುವ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗುತ್ತಿದೆ. ಇದರಿಂದ ರೈತರಿಗೆ ಸಮಯ ಹಾಗೂ ಉಪವಿಭಾಗಾಧಿಕಾರಿ ಕಚೇರಿಗೆ ಬಂದು ಹೋಗುವ ಖರ್ಚು ಉಳಿತಾಯವಾಗಲಿದೆ ಎಂದರು.
ಪಹಣಿ ಕಲಂ– 3 ಮತ್ತು 9ರ ವಿಸ್ತೀರ್ಣ ತಿದ್ದುಪಡಿ ಮಾಡುವ ಅಧಿಕಾರವನ್ನು ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲೂ ತಹಶೀಲ್ದಾರ್ ಅವರಿಗೆ ನೀಡಲಾಗಿದೆ. ಆದರೆ ಜಮೀನುಗಳ ಮೌಲ್ಯ ಹೆಚ್ಚಾಗಿರುವುದರಿಂದ ಸರಿಯಾದ ವಿಚಾರಣೆ, ದಾಖಲೆಗಳ ಪರಿಶೀಲನೆ ನಡೆಯಬೇಕು ಎನ್ನುವ ಉದ್ದೇಶದಿಂದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಮಂಗಳೂರು ಜಿಲ್ಲೆಯಲ್ಲಿ ಮಾತ್ರ ಈ ಅಧಿಕಾರವನ್ನು ಉಪವಿಭಾಗಾಧಿಕಾರಿಗಳಿಗೆ ನೀಡಲಾಗಿದೆ.
ಇತ್ಯರ್ಥವಾದ ಪ್ರಕರಣಗಳ ಸಂಖ್ಯೆ ದೇವನಹಳ್ಳಿ; 68 ದೊಡ್ಡಬಳ್ಳಾಪುರ; 633 ಹೊಸಕೋಟೆ; 69 ನೆಲಮಂಗಲ; 547 ಒಟ್ಟು; 1,317
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.