ಆನೇಕಲ್: ಇಲ್ಲಿಗೆ ಸಮೀಪದ ತಮಿಳುನಾಡು ಗಡಿಗ್ರಾಮ ಅಣ್ಣಿಯಾಳ ಬಳಿ ಭಾನುವಾರ ಕಾಡಾನೆ ದಾಳಿಯಿಂದ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ.
ತಮಿಳುನಾಡಿನ ಅಣ್ಣಿಯಾಳ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ವಸಂತಮ್ಮ (37) ಮತ್ತು ಕೃಷಿ ಕೂಲಿ ಕಾರ್ಮಿಕ ಮಹಿಳೆ ಅಶ್ವಥಮ್ಮ(40) ಮೃತರು.
ರಜೆ ಇದ್ದ ಕಾರಣ ವಸಂತಮ್ಮ ತೋಟದ ಕೆಲಸಕ್ಕೆ ತೆರಳಿದ್ದರು. ಅಶ್ವಥಮ್ಮ ಎಂದಿನಂತೆ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು ತೋಟದಲ್ಲಿ ಕೆಲಸ ಮಾಡುತ್ತಿದ್ದ ಈ ಇಬ್ಬರ ಮೇಲೆ ದಾಳಿ ನಡೆಸಿವೆ. ಅಲ್ಲದೆ ಹಸುಗಳ ಮೇಲೂ ದಾಳಿ ನಡೆಸಿದ್ದು, ಮೂರು ಹಸು ಗಾಯಗೊಂಡಿವೆ.
ಕಾಡಾನೆ ದಾಳಿ ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿ ತಮಿಳುನಾಡಿನ ಥಳಿ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ರಾಮಚಂದ್ರನ್ ನೇತೃತ್ವದಲ್ಲಿ ಗ್ರಾಮಸ್ಥರು ರಸ್ತೆ ತಡೆ ನಡೆಸಿದರು.
ಕಳೆದ ಕೆಲವು ದಿನಗಳಿಂದ ಗುಮ್ಮಳಾಪುರ, ಅಣ್ಣಿಯಾಳ, ಥಳಿ ಮತ್ತು ಆನೇಕಲ್ ತಾಲ್ಲೂಕಿನ ಮೆಣಸಿಗನಹಳ್ಳಿ, ಕಾಳನಾಯಕನಹಳ್ಳಿ ಗ್ರಾಮಗಳಲ್ಲಿ ಕಾಡಾನೆ ಹಿಂಡು ಪ್ರತ್ಯಕ್ಷವಾಗುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.