ಆನೇಕಲ್ : ದಶಕಗಳ ಹಿಂದೆ ಆಹಾರ, ವಸತಿ, ವಸ್ತ್ರದ ಕೊರತೆ ಇತ್ತು. ಈಚೆಗೆ ಇವುಗಳ ಬದಲಿಗೆ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ. ಈ ಸಮಸ್ಯೆಗಳಿಗೆ ಪರಿಸರ ನಾಶವೇ ಕಾರಣ. ಆರೋಗ್ಯಕರ ಸಮಾಜಕ್ಕಾಗಿ ಪರಿಸರ ಉಳಿಸಿ ಸಂರಕ್ಷಿಸಬೇಕೆಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಕಿವಿಮಾತು ಹೇಳಿದರು.
ತಾಲ್ಲೂಕಿನ ದ್ಯಾವಸಂದ್ರದಲ್ಲಿ ಬೆಂಗಳೂರಿನ ಕಾಳಿದಾಸ ಮತ್ತು ಸಂಗೊಳ್ಳಿರಾಯಣ್ಣ ವಿದ್ಯಾರ್ಥಿನಿಲಯದ ಹಳೆ ವಿದ್ಯಾರ್ಥಿಗಳ ಸಂಘ, ದ್ಯಾವಸಂದ್ರ ನವಭಾರತ ಅಸೋಸಿಯೇಷನ್ ಸಹಯೋಗದಲ್ಲಿ ಭಾನುವಾರ ಗುಂಡು ತೋಪಿನಲ್ಲಿ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್.ಕಾಂತರಾಜು ಮಾತನಾಡಿ, ಸಮಾಜದ ಋಣ ತೀರಿಸಬೇಕಾದರೆ ಪ್ರಕೃತಿ ರಕ್ಷಣೆಗೆ ಕೊಡುಗೆ ನೀಡಬೇಕು ಎಂದರು.
ಮುಖ್ಯಮಂತ್ರಿ ಜಂಟಿ ಕಾರ್ಯದರ್ಶಿ, ಸಂಘದ ಅಧ್ಯಕ್ಷ ಎಂ.ರಾಮಯ್ಯ ಮಾತನಾಡಿ, ಪರಿಸರ ಜಾಗೃತಿ ಮೂಡಿಸಲು ಗಿಡ ನೆಡುವ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ದ್ಯಾವಸಂದ್ರ ಗ್ರಾಮದಲ್ಲಿ 10ನೇ ತರಗತಿವರೆಗೂ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿ, ಹಳೆ ವಿದ್ಯಾರ್ಥಿಗಳ ಸಂಘದ ನೆರವು ಪಡೆದು ಎಂಬಿಬಿಎಸ್ ತೇರ್ಗಡೆಯಾದ ಗ್ರಾಮದ ಮೊದಲ ವಿದ್ಯಾರ್ಥಿ ಮನೀಷ್ ಅವರನ್ನು ಸನ್ಮಾನಿಸಲಾಯಿತು.
ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಸಿಇಒ ಕಾಂತರಾಜು, 5ನೇ ಹಣಕಾಸಿನ ಆಯೋಗದ ಸದಸ್ಯ ಆರ್.ಎಸ್.ಪೋಂಡೆ, ತಹಶೀಲ್ದಾರ್ ಶಶಿಧರ್ ಮಾಡ್ಯಾಳ್, ತಾಲ್ಲೂಕು ಪಂಚಾಯಿತಿ ಸಿಇಒ ಕೆ.ಮಂಜುನಾಥ್, ಎಸಿಎಫ್ ದೇವರಾಜು, ವಲಯ ಅರಣ್ಯಾಧಿಕಾರಿ ಪ್ರಶಾಂತ್ ಕುಮಾರ್, ಕಲ್ಲುಬಾಳು ಗ್ರಾಮ ಪಂಚಾಯಿತಿ ಪಿಡಿಒ ಲಕ್ಷ್ಮಿನಾರಾಯಣ್, ಸಂಘದ ಎನ್.ನಟರಾಜ್, ಎಸ್.ದೇವರಾಜು, ಮುದ್ರಣ ಇಲಾಖೆ ಜಂಟಿ ನಿರ್ದೇಶಕ ಮಹದೇವ್, ನಾಗಪ್ಪ, ಲಿಂಗಪ್ಪ, ಮಲ್ಲೇಶಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.