ಹೊಸಕೋಟೆ: ತಾಲ್ಲೂಕಿನ ದೊಡ್ಡಹುಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 30-40 ವರ್ಷಗಳಿಂದ ಮನೆಗಳನ್ನು ನಿರ್ಮಾಣ ಮಾಡಿಕೊಂಡು ವಾಸಿಸುತ್ತಿದ್ದು ಕುಟುಂಬಗಳಿಗೆ ಹಕ್ಕುಪತ್ರ ಹಾಗೂ ಇ–ಖಾತೆ ವಿತರಿಸಲಾಯಿತು.
ಸೋಮವಾರ ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಾಸಕ ಶರತ್ ಬಚ್ಚೇಗೌಡ, ಬಡ ಜನರಿಗೆ ನೀಡಿದ ಭರವಸೆಯಂತೆ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗಿದೆ ಎಂದರು.
‘ದೊಡ್ಡಹುಲ್ಲೂರು ಗ್ರಾಮದಲ್ಲಿ ಒಂದೇ ಸೂರಿನಡಿ ವಾಸಿಸುತ್ತಿರುವ ಬಡವರ ಅನುಕೂಲಕ್ಕಾಗಿ ಸರ್ವೆ ನಂ.78ರಲ್ಲಿ 3 ಎಕರೆ 2 ಗುಂಟೆ ಸ್ಥಳ ಆಶ್ರಯ ನಿವೇಶನಕ್ಕೆ ಹಸ್ತಾಂತರಿಸಲಾಗಿದೆ. ನಿಸ್ಪಕ್ಷಪಾತವಾಗಿ ಗ್ರಾಮದ ಅರ್ಹರಿಗೆ 150 ನಿವೇಶನ ಶೀಘ್ರ ನೀಡಲಾಗುವುದು ಎಂದರು.
ತಾಲೂಕಿನಲ್ಲಿ ಹೈನುಗಾರಿಕೆ ನಂಬಿ 8500 ಕುಟುಂಬಗಳು ಜೀವನ ನಡೆಸುತ್ತಿವೆ. 1ಲಕ್ಷ ಲೀಟರ್ನಷ್ಟು ಹಾಲು ಉತ್ಪಾದನೆಯಾಗುತ್ತಿದೆ. ತಾಲ್ಲೂಕಿನಲ್ಲಿ 230 ಮೇವು ಕತ್ತರಿಸುವ ಯಂತ್ರ ಹಾಗೂ 6000 ಮೇವಿನ ಕಿಟ್ ನೀಡಲಾಗಿದೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದರು.
‘ನಿಗಮ ಮಂಡಳಿ ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸಲು ಸಿದ್ದನಿದ್ದೇನೆ. ನನ್ನನ್ನು ನಂಬಿ ಮತ ನೀಡಿ ಗೆಲ್ಲಿಸಿರುವ ಕ್ಷೇತ್ರದ ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಜವಾಬ್ದಾರಿ ಕಟ್ಟುನಿಟ್ಟಾಗಿ ನಿಭಾಯಿಸುತ್ತೇನೆ’ ಎಂದು ಶಾಸಕ ಶರತ್ ಬಚ್ಚೇಗೌಡ ಈ ಸಂದರ್ಭದಲ್ಲಿ ತಿಳಿಸಿದರು.
ಮುಖಂಡರಾದ ಬಿ.ಎನ್.ಗೋಪಾಲಗೌಡ, ಬಿ.ವಿ.ಭೈರೇಗೌಡ, ಮುಖಂಡರಾದ ಎಲ್.ಎನ್.ಟಿ.ಮಂಜುನಾಥ್, ಶಿವನಾಪುರ ಕಲ್ಲಪ್ಪ, ತಾ.ಪಂ ಇ.ಒ ಚಂದ್ರಶೇಖರ್, ತಹಶೀಲ್ದಾರ್ ವಿಜಯಕುಮಾರ್, ಆರ್.ಐ ಆಂಜಿನಮ್ಮ, ವಿಐ ಕಿರಣ್, ಕಾರ್ಯದರ್ಶಿ ರಮೇಶ್, ಪಿಡಿಒ ಆಶಾ ಹಾಗೂ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.