ಆನೇಕಲ್: ತಾಲ್ಲೂಕಿನ ವಿವಿಧೆಡೆ ಪದೇ ಪದೇ ಚಿರತೆಯ ದರ್ಶನವಾಗುತ್ತಿದ್ದು ಜನರಲ್ಲಿ ಆತಂಕ ಮನೆ ಮಾಡಿದೆ. ಶನಿವಾರ ಚಂದಾಪುರ ಸಮೀಪದ ಹೀಲಲಿಗೆ ಬಳಿ ಚಿರತೆ ಕಂಡುಬಂದಿದ್ದು, ಚಿರತೆ ಓಡಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕಳೆದ ಎರಡು ಮೂರು ದಿನಗಳಿಂದ ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಟ್ಟರೂ ಚಿರತೆ ಸೆರೆಹಿಡಿಯಲು ಆಗಿಲ್ಲ. ಇದೀಗ ಹೀಲಲಿಗೆ ಗ್ರಾಮದ ಸರ್ಕಾರಿ ಶಾಲೆಯ ಹಿಂಭಾಗದಲ್ಲಿ ಚಿರತೆ ಕಾಣಿಸಿಕೊಂಡಿದ್ದು ಸ್ಥಳೀಯರು ಭಯಗೊಂಡಿದ್ದಾರೆ.
ಶುಕ್ರವಾರ ಹುಸ್ಕೂರು ಸಮೀಪ ಬೋನಿಟ್ಟು ಚಿರತೆ ಹಿಡಿಯುವ ಪ್ರಯತ್ನ ನಡೆಸಿದ್ದಾರೆ. ಇತ್ತೀಚೆಗೆ ಕೂಡ್ಲು, ಗಟ್ಟಹಳ್ಳಿ, ಹುಸ್ಕೂರು, ಗೋಪಸಂದ್ರ ಸಮೀಪ ಚಿರತೆ ಓಡಾಟ ಆತಂಕ ಮೂಡಿಸಿದೆ.
ಅರಣ್ಯ ಇಲಾಖೆಯ ಸಿಬ್ಬಂದಿ ಚಿರತೆ ಓಡಾಟದ ಬಗ್ಗೆ ನಿಗಾ ವಹಿಸಿದ್ದು ಸಾರ್ವಜನಿಕರು, ಸ್ಥಳೀಯರಿಂದ ಮಾಹಿತಿ ಪಡೆಯಲಾಗುತ್ತಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ರಾತ್ರಿಯೂ ಹೀಲಲಿಗೆ, ಗೋಪಸಂದ್ರ, ಹುಸ್ಕೂರು ಗ್ರಾಮಗಳ ಜನತೆಯಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.