ವಿಜಯಪುರ(ದೇವನಹಳ್ಳಿ): ಹೋಬಳಿಯಾದ್ಯಂತ ಸೋಮವಾರ ಮೋಡ ಮುಸುಕಿದ ವಾತಾವರಣದ ನಡುವೆ, ಜಿಟಿಜಿಟಿ ಮಳೆ ಸುರಿಯಿತು. ಜನ ಮನೆಯಿಂದ ಹೊರಗೆ ಬರಲು ಹಿಂಜರಿದರು.
ಬೆಳಗ್ಗೆಯೇ ಜಿಟಿ, ಜಿಟಿ ಮಳೆ ಶುರುವಾಯಿತು. ಜೊತೆಗೆ ಜೋರು ಮಳೆಯಿಂದ ಕೃಷಿ ಚಟುವಟಿಕೆ, ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಕೆಲಸಗಳಿಗೆ ಅಡಚಣೆ ಉಂಟಾಯಿತು. ಇದರಿಂದ ಕಾರ್ಮಿಕರು ಕೆಲಸವಿಲ್ಲದೆ ವಾಪಸ್ ಮನೆ ತೆರಳಿದರು.
ಮಳೆಯಿಂದಾಗಿ ಹಿಪ್ಪುನೇರಳೆ ಸೊಪ್ಪಿನಲ್ಲಿ ನೀರು ತುಂಬಿಕೊಂಡಿದ್ದರಿಂದ ಸೊಪ್ಪಿನಲ್ಲಿದ್ದ ನೀರನ್ನು ಉದುರಿಸಿ, ಸೊಪ್ಪನ್ನು ಒಣಗಿಸಿ, ಕಟಾವು ಮಾಡಿಕೊಂಡು ಬರಲು ಹೆಣಗಾಡಬೇಕಾಯಿತು. ನೀರಿನ ತೇವಾಂಶದಿಂದ ಕೂಡಿರುವ ಸೊಪ್ಪನ್ನು ಹುಳುಗಳಿಗೆ ಕೊಟ್ಟರೆ, ಸುಣ್ಣ ಕಟ್ಟುರೋಗ ಬರುತ್ತದೆ ಎನ್ನುವ ಕಾರಣದಿಂದ ಹುಳು ಸಾಕಾಣಿಕೆ ಮನೆಯಲ್ಲಿ ಸೊಪ್ಪನ್ನು ಹರಡಿ, ವಿದ್ಯುತ್ ದೀಪಗಳನ್ನು ಬೆಳಗಿಸಿ ಆರಿಸಿದ ನಂತರ ಹುಳಗಳಿಗೆ ನೀಡುತ್ತಿದ್ದಾರೆ,.
ಬಯಲಿನಲ್ಲಿ ಕುರಿಗಳು ಮೇಯಿಸುವ ಕುರಿಗಾಹಿಗಳು, ಕುರಿಗಳನ್ನು ಹೊರಗೆ ಬಿಡಲಾಗದೆ, ಹಟ್ಟಿಗಳಲ್ಲೆ ಮಂದೆ ಹಾಕಿದ್ದರು.
ಕೋಲಾರ ಮುಖ್ಯರಸ್ತೆ ಸೇರಿದಂತೆ ಪಟ್ಟಣದಲ್ಲಿ ರಸ್ತೆಗಳಲ್ಲಿರುವ ಗುಂಡಿಗಳಲ್ಲಿ ಮಳೆ ನೀರು ತುಂಬಿಕೊಂಡು ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ನೀರು ನಿಂತಿರುವುದರಿಂದ ಗುಂಡಿ ಎಲ್ಲಿದೆ, ರಸ್ತೆ ಎಲ್ಲಿದೆ ಎಂದು ಗೊತ್ತಾಗದೆ ನಿಧನವಾಗಿ ವಾಹನ ಚಲಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.