ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟ್ಯಾಕ್ಸಿ ನಿಲ್ದಾಣದಲ್ಲಿ ಮಂಗಳವಾರ ತಡರಾತ್ರಿ ಕೆಎಸ್ಟಿಡಿಸಿ ಟ್ಯಾಕ್ಸಿ ಚಾಲಕನನ್ನು ಮತ್ತೊಬ್ಬ ಟ್ಯಾಕ್ಸಿ ಚಾಲಕ ಕೊಲೆ ಮಾಡಿದ್ದಾನೆ.
ಮೃತನನ್ನು ದೇವನಹಳ್ಳಿಯ ರಾಮುಹಳ್ಳಿ ನಿವಾಸಿ ಲೋಕೇಶ್ (35) ಎಂದು ಗುರುತಿಸಲಾಗಿದೆ. ಕನಕಪುರ ನಿವಾಸಿ, ಕೆಎಸ್ಟಿಡಿಸಿ ಟ್ಯಾಕ್ಸಿ ಚಾಲಕ ಮುತ್ತುರಾಜು ಕೊಲೆ ಆರೋಪಿ. ಇಬ್ಬರೂ ಸ್ನೇಹಿತರಾಗಿದ್ದು, ಹಣಕಾಸಿನ ವಿಚಾರಕ್ಕೆ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ನೇಹಿತ ಲೋಕೇಶ್ ಅವರಿಂದ ಮುತ್ತುರಾಜ್ ಹಣ ಪಡೆದಿದ್ದರು ಎನ್ನಲಾಗಿದೆ. ಮಂಗಳವಾರ ರಾತ್ರಿ ಟ್ಯಾಕ್ಸಿಯಲ್ಲಿ ಕುಳಿತು ಸಾಲ ಮರುಪಾವತಿ ಕುರಿತು ಮಾತನಾಡುತ್ತಿದ್ದರು. ಈ ವೇಳೆ ಮಾತು ವಿಕೋಪಕ್ಕೆ ತಿರುಗಿ ಮುತ್ತುರಾಜ್ ತಮ್ಮ ಕೈಯಲ್ಲಿದ್ದ ಕೀ ಬಂಚ್ನಲ್ಲಿದ್ದ ಚಿಕ್ಕ ಚಾಕುವಿನಿಂದ ಲೋಕೇಶ್ ಎದೆಯ ಭಾಗಕ್ಕೆ ಜೋರಾಗಿ ಚುಚ್ಚಿದ್ದಾರೆ. ರಕ್ತಸ್ರಾವದಿಂದ ಲೋಕೇಶ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಮುತ್ತುರಾಜ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಮಾನ ನಿಲ್ದಾಣ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.