ವಿಜಯಪುರ (ದೇವನಹಳ್ಳಿ): ಕಳ್ಳರು ಸೋಮವಾರ ಮುಂಜಾನೆ ಇಲ್ಲಿಯ ಗುರಪ್ಪನಮಠದ ಓಂಕಾರೇಶ್ವರ ದೇವಾಲಯದಲ್ಲಿ ನಾಲ್ಕು ಹುಂಡಿಗಳಿಗೆ ಕನ್ನ ಹಾಕಿದ್ದಾರೆ.
ದೇವಾಲಯದ ಮೇಲೆ ಅಳವಡಿಸಿದ್ದ ತಗಡಿನ ಶೀಟ್ ಬೋಲ್ಟ್ ಬಿಚ್ಚಿ ದೇವಾಲಯದೊಳಗೆ ಇಳಿದ ಕಳ್ಳರು ದೇವಾಲಯದ ಮುಖ್ಯದ್ವಾರಕ್ಕೆ ಒಳಗಿನಿಂದ ಚಿಲಕ ಹಾಕಿದ್ದಾರೆ. ನಂತರ ದೇವಾಲಯದಲ್ಲಿದ್ದ ನಾಲ್ಕು ಹುಂಡಿಗಳ ಬೀಗ ಮುರಿದು ಹಣ ಕದ್ದು ಮೇಲ್ಛಾವಣಿಯ ಮೂಲಕ ಪರಾರಿಯಾಗಿದ್ದಾರೆ.
ಕಳೆದ ನಾಲ್ಕು ತಿಂಗಳಿನಿಂದ ಹುಂಡಿ ಕಾಣಿಕೆಯನ್ನು ಎಣಿಕೆ ಮಾಡಿರಲಿಲ್ಲ. ಕಾರ್ತಿಕ ಮಾಸದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದು ಹೋಗಿದ್ದಾರೆ. ಲಕ್ಷಾಂತರ ರೂಪಾಯಿ ಹಣ ಸಂಗ್ರಹವಾಗಿರಬಹುದೆಂದು ಆಡಳಿತ ಮಂಡಳಿಯವರು ಅಂದಾಜಿಸಿದ್ದಾರೆ.
ಸಂಕ್ರಾಂತಿ ಅಂಗವಾಗಿ ದೇವರಿಗೆ ವಿಶೇಷ ಅಲಂಕಾರ ಮಾಡಲು ಭಾನುವಾರ ತಂದು ದೇವಾಲಯದಲ್ಲಿ ಇಟ್ಟಿದ್ದ ₹15 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಒಡವೆಗಳನ್ನು ಕಳ್ಳರು ಮುಟ್ಟಿಲ್ಲ.
ದೇವಾಲಯದ ಗರ್ಭಗುಡಿಯಲ್ಲಿರುವ ಪಾರ್ವತಿ ಮೂರ್ತಿಯ ಆಭರಣ ತೆಗೆಯುವ ಪ್ರಯತ್ನ ಮಾಡಿ ವಿಫಲರಾಗಿದ್ದಾರೆ. ದೇವಿಗೆ ಹಾಕಿದ್ದ ಗಾಜಿನ ಬಳೆಗಳು ಒಡೆದಿವೆ.
ಸೋಮವಾರ ಬೆಳಗಿನ ಜಾವ ಅರ್ಚಕರ ಕುಟುಂಬದವರು ದೇವಾಲಯ ಶುಚಿಗೊಳಿಸಲು ಬಂದಾಗ ದೇವಾಲಯದ ಬೀಗ ತೆಗೆದು ಬಾಗಿಲು ತಳ್ಳುವ ಪ್ರಯತ್ನ ಮಾಡಿದ್ದಾರೆ. ಹಿಂದಿನಿಂದ ಚಿಲಕ ಹಾಕಿದ್ದರಿಂದ ಬಾಗಿಲು ತೆರೆಯಲು ಸಾಧ್ಯವಾಗಿಲ್ಲ. ದೇವಾಲಯ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಮೇಲ್ಛಾವಣಿಯ ಮೂಲಕ ಸ್ಥಳೀಯರೊಬ್ಬರನ್ನು ಇಳಿಸಿ ಒಳಗಿನಿಂದ ಹಾಕಿದ್ದ ಚಿಲಕ ತೆಗೆಸಿ ಬಾಗಿಲು ತೆರೆದು ಒಳ ಹೋಗಿ ನೋಡಿದಾಗ ಹುಂಡಿ ಕಳ್ಳತನ ಗೊತ್ತಾಗಿದೆ. ದೇವಾಲಯದ ಆಡಳಿತ ಮಂಡಳಿಯವರು ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.