ಆನೇಕಲ್: ಪಟ್ಟಣದಲ್ಲಿ ಆಜಾದ್ ಯುವ ಫೌಂಡೇಷನ್ನಿಂದ ಮಹಿಳಾ ದಿನಾಚರಣೆ ಪ್ರಯುಕ್ತ ಸರ್ಕಾರಿ ಶಾಲಾ ಶಿಕ್ಷಕರು ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಆಜಾದ್ ಯುವ ಫೌಂಡೇಷನ್ ಅಧ್ಯಕ್ಷ ಆನೇಕಲ್ ರವಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದ್ದಾರೆ. ಅಡುಗೆ ಮನೆಯಿಂದ ಅಂತರಿಕ್ಷದವರೆಗೆ ಮಹಿಳೆಯರ ಸಾಧನೆ ಅನನ್ಯವಾದದ್ದು. ಬಾಹ್ಯಕಾಶದಲ್ಲಿ ಕಾರ್ಯನಿರ್ವಹಿಸುವವರಲ್ಲಿ ಮಹಿಳೆಯರೇ ಹೆಚ್ಚಿದ್ದಾರೆ ಎಂದರು.
ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಸಂಘದಿಂದ ಗ್ರಾಮೀಣ ಪ್ರದೇಶದಲ್ಲಿ ಮಹಿಳಾ ಹಕ್ಕುಗಳು, ಮಹಿಳಾ ರಕ್ಷಣೆಗೆ ಸಂಬಂಧಿಸಿದಂತೆ ಜಾಗೃತಿ ಜಾಥಾ ಆಯೋಜಿಸಲಾಗುವುದು. ಬೀದಿ ನಾಟಕಗಳ ಮೂಲಕ ವರದಕ್ಷಿಣೆ, ಮಹಿಳೆಯರ ಮೇಲೆ ಹಲ್ಲೆ, ಅತ್ಯಾಚಾರರಂತಹ ಪಿಡುಗುಗಳ ವಿರುದ್ಧ ಅಭಿಯಾನ ರೂಪಿಸಲಾಗುವುದು ಎಂದರು.
ಆಹಾರ ಸುರಕ್ಷತಾ ಅಧಿಕಾರಿ ಅನುಸೂಯ ಮಾತನಾಡಿ, ಕುಟುಂಬದ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಮಹಿಳೆಯ ಪಾತ್ರ ಹೆಚ್ಚಿರುತ್ತದೆ. ಲಿಂಗ ತಾರತಮ್ಯವಿಲ್ಲದೆ ಮಹಿಳೆಯರನ್ನು ಗೌರವಿಸುವ ಮತ್ತು ಅವರ ಹಕ್ಕು ಪಾಲಿಸುವ ಅವಶ್ಯಕತೆ ಇದೆ ಎಂದರು.
ಮುಖಂಡರಾದ ಗಣೇಶ್, ನಾಗರಾಜ್ ಪದ್ಮಶಾಲಿ, ಅಮೃತ, ಸುಧಾ, ಸಣ್ಣಗಂಗಮ್ಮ, ಪಾರ್ವತಿ, ಅನಸೂಯ, ವೀಣಾ, ಕೋಮಲ, ಕಾರ್ತಿಕ್ ಸಂತೋಷ್ ವಿನಯ್ ಮಹೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.