ಬೆಳಗಾವಿ: ‘ಹಿಡಕಲ್ ಜಲಾಶಯದ ಘಟಪ್ರಭಾ ಬಲದಂಡೆ ಕಾಲುವೆಯ (ಕಬ್ಬೂರ ಅಂಚು ಕಾಲುವೆ) ಆಧುನೀಕರಣಕ್ಕಾಗಿ ಈಗಾಗಲೇ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಖಾಸಗಿ ಕಂಪನಿಗೆ ವಹಿಸಲಾಗಿದೆ. ಇದರ ಸರ್ವೆ ಕಾರ್ಯ ಪ್ರಗತಿಯಲ್ಲಿದೆ’ ಎಂದು ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜೇಶ ಅಮ್ಮಿನಬಾವಿ ತಿಳಿಸಿದ್ದಾರೆ.
‘ಪ್ರಜಾವಾಣಿ’ಯಲ್ಲಿ ಗುರುವಾರ ಪ್ರಕಟವಾದ ‘ಅಧಿಕಾರಿಗಳ ನಿರ್ಲಕ್ಷ್ಯ: ರೈತರಿಂದ ಹೂಳು ತೆರವು’ ವಿಶೇಷ ವರದಿಗೆ ಅವರು ಪ್ರತಿಕ್ರಿಯಿಸಿದ್ದಾರೆ. ‘45 ಕಿ.ಮೀ ಉದ್ದದ ಕಾಲುವೆಯ ಸ್ಟ್ರಕ್ಚರ್ಗಳು, ಲೈನಿಂಗ್ ಹಾಳಾಗಿದ್ದರಿಂದ ಕೊನೆಯ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ತುರ್ತಾಗಿ ಕಾಲುವೆ ದುರಸ್ತಿಗೆ ₹ 1 ಕೋಟಿಗಾಗಿ ಅನುಮೋದನೆಗೆ ಕಳಿಸಲಾಗಿದೆ’ ಎಂದು ಹೇಳಿದ್ದಾರೆ.
‘ಚಿಕ್ಕೋಡಿ ಭಾಗದಲ್ಲಿರುವ ಐದು ಉಪವಿಭಾಗಗಳಲ್ಲಿ ಕಾಲುವೆ ದುರಸ್ತಿಗೆ ₹5 ಲಕ್ಷ ಮೀಸಲು ಇಡಲಾಗಿದೆ. ಇದು ಸಾಕಾಗುತ್ತಿಲ್ಲ. ಉಳಿದ ₹95 ಲಕ್ಷವನ್ನೂ ಮಂಜೂರು ಮಾಡಬೇಕು ಎಂದು ನೀರಾವರಿ ನಿಗಮದ ಬೆಳಗಾವಿಯ ಮುಖ್ಯ ಎಂಜಿನಿಯರ್ ವರದಿ ಸಲ್ಲಿಸಿದ್ದಾರೆ. ಫಲಾನುಭವಿ ರೈತರಿಗೂ ವಸ್ತುಸ್ಥಿತಿ ತಿಳಿಸಲಾಗಿದೆ. ಡಿಪಿಆರ್ ಸಿದ್ಧವಾದ ಬಳಿಕ ರೈತರ ಸಮಸ್ಯೆ ಬಗೆಹರಿಯಲಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.