ADVERTISEMENT

ರಾಜ್ಯದಲ್ಲಿ 188 ಹೊಸ ಇಂದಿರಾ ಕ್ಯಾಂಟೀನ್‌: ಸಚಿವ ಭೈರತಿ ಸುರೇಶ್‌ 

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2023, 9:40 IST
Last Updated 6 ಅಕ್ಟೋಬರ್ 2023, 9:40 IST
ಬೈರತಿ ಸುರೇಶ್‌
ಬೈರತಿ ಸುರೇಶ್‌   

ಬೆಳಗಾವಿ: ‘ರಾಜ್ಯದಲ್ಲಿ ಮತ್ತೆ 188 ಇಂದಿರಾ ಕ್ಯಾಂಟೀನ್‌ಗಳನ್ನು ಹೊಸದಾಗಿ ತೆರೆಯಲಾಗುವುದು. ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ ಶೀಘ್ರ ಇವು ಕಾರ್ಯಾರಂಭ ಮಾಡಲಿವೆ’ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ ತಿಳಿಸಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ಉದ್ದೇಶ ಪೂರ್ವಕವಾಗಿ ಇಂದಿರಾ ಕ್ಯಾಂಟೀನ್‌ಗಳನ್ನು ಅಧೋಗತಿಗೆ ತಂದಿತ್ತು. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿ ಯೋಜನೆ. ಯೋಜನೆಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಬಿಜೆಪಿ ಸರ್ಕಾರ ಸರಿಯಾಗಿ ನಿರ್ವಹಣೆ ಮಾಡಲಿಲ್ಲ. ಇದರಿಂದ ಕ್ಯಾಂಟೀನ್‌ಗಳು ಮುಚ್ಚುವ ಹಂತ ತಲುಪಿದ್ದವು. ಆದರೆ, ಬಡವರು, ಕಾರ್ಮಿಕರ ಪಾಲಿಕೆ ವರದಾನವಾದ ಈ ಕ್ಯಾಂಟೀನಗಳಿಗೆ ಮತ್ತೆ ಉತ್ತೇಜನ ನೀಡಲಿದ್ದೇವೆ’ ಎಂದರು.

‘ಎಲ್ಲ ಕ್ಯಾಂಟೀನ್‌ಗಳನ್ನು ಪುನಶ್ಚೇತನಗೊಳಿಸಲು ₹240 ಕೋಟಿ ಖರ್ಚು ಮಾಡುತ್ತಿದ್ದೇವೆ. ಯಾವ ಪ್ರದೇಶದಲ್ಲಿ ಯಾವ ಊಟ ಇಷ್ಟವೋ ಅದನ್ನೇ ನೀಡಲು ಸೂಚಿಸಲಾಗಿದೆ. ಬೆಳಗಾವಿ ಭಾಗದಲ್ಲಿ ರೊಟ್ಟಿ ಊಟ, ಮೈಸೂರು ಭಾಗದಲ್ಲಿ ರಾಗಿ ಮುದ್ದೆ, ಬೆಂಗಳೂರಿನಲ್ಲಿ ಅನ್ನ, ಇಡ್ಲಿ ಹೀಗೆ ಯಾರಿಗೆ ಏನು ಇಷ್ಟವೋ ಅದನ್ನು ಸಿದ್ಧಪಡಿಸಲಾಗುವುದು’ ಎಂದರು.

ADVERTISEMENT

‘ಪೌರಕಾರ್ಮಿಕರನ್ನು ಕಾಯಂಗೊಳಿಸಿ ಆದೇಶ ಪತ್ರಗಳನ್ನು ಈಗಾಗಲೇ ನಾನು ಮತ್ತು ಸಚಿವ ರಹೀಂಖಾನ್ ವಿತರಿಸುತ್ತಿದ್ದೇವೆ. ಜತೆಗೆ, ಎಲ್ಲೆಲ್ಲಿ ಹೆಚ್ಚಿನ ಕಾರ್ಮಿಕರ ಅಗತ್ಯವಿದೆಯೋ ಅಲ್ಲಿ ನೇಮಕಾತಿ ಕೂಡ ಮಾಡಿಕೊಳ್ಳಲಾಗುವುದು. ಮನೆ ಮಂಜೂರಾತಿ, ಮೂಲಸೌಕರ್ಯ, ಆರೋಗ್ಯ ಯೋಜನೆ ಸೇರಿದಂತೆ ಇಲಾಖೆಯಿಂದ ಕೊಡಬೇಕಾದ ಎಲ್ಲ ಸೌಕರ್ಯಗಳನ್ನೂ ನೀಡಲಾಗುವುದು’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪೌರಾಡಳಿತ ಮತ್ತು ಹಜ್ ಸಚಿವ ರಹೀಂಖಾನ್, ಶಾಸಕ ಆಸೀಫ್ ಸೇಠ್‌ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.