ಚಿಕ್ಕೋಡಿ: ‘ತಾಲ್ಲೂಕಿನ ನವಲಿಹಾಳ, ಸಂಕನವಾಡಿ ಹಾಗೂ ತಪಕರವಾಡಿ ಗ್ರಾಮಗಳ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ರಾಜ್ಯ ಸರ್ಕಾರದಿಂದ ₹8.40 ಕೋಟಿ ಅನುದಾನ ಮಂಜೂರು ಮಾಡಿಸಿಕೊಂಡು ಬರಲಾಗಿದ್ದು, ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಹೇಳಿದರು.
ತಾಲ್ಲೂಕಿನ ನವಲಿಹಾಳ ಗ್ರಾಮದಲ್ಲಿ ಯೋಜನೆಗೆ ಸಂಬಂಧಿಸಿದ ಆದೇಶ ಪ್ರತಿ ವಿತರಿಸಿ ಮಾತನಾಡಿದ ಅವರು, ‘ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಈ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಪ್ರಯತ್ನ ಮಾಡುವ ಭರವಸೆ ನೀಡಲಾಗಿತ್ತು. ಅದರಂತೆ ಈಗ ನವಲಿಹಾಳ, ಸಂಕನವಾಡ ಹಾಗೂ ತಪಕರವಾಡಿ ಗ್ರಾಮಗಳಲ್ಲಿ ಧೂದಗಂಗಾ ನದಿಯಿಂದ 15 ಕಿ.ಮೀ ದೂರ ಪ್ರತ್ಯೇಕ ಪೈಪ್ಲೈನ್ ಮಾಡಿಸಿಕೊಂಡು ನೀರು ಪೂರೈಕೆ ಮಾಡಲಾಗುವುದು. ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭ ಮಾಡಲಾಗುವುದು’ ಎಂದು ಭರವಸೆ ನೀಡಿದರು.
ಖಡಕಲಾಟ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಕೇಶ ಚಿಂಚಣೆ, ನವಲಿಹಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಚಿನ ಹುಕ್ಕೇರಿ, ಉಪಾಧ್ಯಕ್ಷೆ ಕವಿತಾ ಮೋಟನ್ನವರ, ಗ್ರಾಮ ಪಂಚಾಯಿತಿ ಸದಸ್ಯರಾದ ಮಾರುತಿ ಕವಲಾಪೂರೆ, ಸವಿತಾ ಕಡಗಾವೆ, ಮನೋಹರ ವಾಘಮೋಡೆ, ಸರಳಾಬಾಯಿ ಲಠ್ಠೆ, ತಾತ್ಯಾಸಾಹೇಬ ಕಮತೆ, ಸಚಿನ ಸನದಿ, ಯಲ್ಲವ್ವ ಖೋತ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.