ADVERTISEMENT

ನಂದಗಡ: ಬೆಳಕಿಗೆ ಬಾರದ ಗಲ್ಲಿಗೇರಿದವರ ಇತಿಹಾಸ

ಸಂಗೊಳ್ಳಿ ರಾಯಣ್ಣನ ಜೊತೆ ಕ್ರಾಂತಿ ಮಾಡಿದ ಯೋಧರ ಬಗ್ಗೆ ಆಗದ ಸಂಶೋಧನೆ

ಸಂತೋಷ ಈ.ಚಿನಗುಡಿ
Published 17 ಜನವರಿ 2024, 5:57 IST
Last Updated 17 ಜನವರಿ 2024, 5:57 IST
<div class="paragraphs"><p>ಖಾನಾಪುರ ತಾಲ್ಲೂಕಿನ ನಂದಗಡ ಹೊರವಲಯದಲ್ಲಿ ಇರುವ, ಸಂಗೊಳ್ಳಿ ರಾಯಣ್ಣ ಹಾಗೂ ಆರು ಸಹಚರರನ್ನು ಗಲ್ಲಿಗೇರಿಸಿದ ಆಲದ ಮರ </p></div>

ಖಾನಾಪುರ ತಾಲ್ಲೂಕಿನ ನಂದಗಡ ಹೊರವಲಯದಲ್ಲಿ ಇರುವ, ಸಂಗೊಳ್ಳಿ ರಾಯಣ್ಣ ಹಾಗೂ ಆರು ಸಹಚರರನ್ನು ಗಲ್ಲಿಗೇರಿಸಿದ ಆಲದ ಮರ

   

–ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ

ನಂದಗಡ (ಬೆಳಗಾವಿ ಜಿಲ್ಲೆ): ಸಂಗೊಳ್ಳಿ ರಾಯಣ್ಣ ಗಲ್ಲಿಗೇರಿದ ವಿಷಯ ಎಲ್ಲರಿಗೂ ಗೊತ್ತು. ಆದರೆ, ರಾಯಣ್ಣನ ಜೊತೆ ಗಲ್ಲಿಗೇರಿದ ಇನ್ನೂ ಆರು ಕ್ರಾಂತಿಕಾರಿಗಳು, ಕರಿ ನೀರಿನ ಶಿಕ್ಷೆಗೆ ಗುರಿಯಾದ ಆರು ವೀರರ ಚರಿತ್ರೆ ದಾಖಲಾಗಿಲ್ಲ.

ADVERTISEMENT

ಎರಡನೇ ಆಂಗ್ಲೊ– ಕಿತ್ತೂರು ಯುದ್ಧದ ನಂತರ ಬ್ರಿಟಿಷ್‌ ಸರ್ಕಾರ, 1831ರ ಜನವರಿ 26ರಂದು ಸಂಗೊಳ್ಳಿ ರಾಯಣ್ಣ ಸೇರಿ ಏಳು ಜನರನ್ನು ಏಕಕಾಲಕ್ಕೆ ಬಹಿರಂಗವಾಗಿ ಗಲ್ಲಿಗೇರಿಸುತ್ತದೆ. ಎಲ್ಲರೂ ಸಮಾನ ಪರಾಕ್ರಮ ತೋರಿದವರು. ಇದಾಗಿ 193 ವರ್ಷಗಳಾದರೂ ಸರ್ಕಾರವು ರಾಯಣ್ಣನ ಹೊರತುಪಡಿಸಿ ಉಳಿದ ವೀರರ ಬಗ್ಗೆ ಸಂಶೋಧನೆ ನಡೆಸಿಲ್ಲ.

ಸಂಶೋಧಕ ಪ್ರೊ. ಜ್ಯೋತಿ ಹೊಸೂರ ಅವರ ಕೆಲ ಅಧ್ಯಯನಗಳಲ್ಲಿ ಹಾಗೂ ಮಲ್ಲಿಕಾರ್ಜುನ ಐಮಿಂಚಿ ಅವರ ಪಿಎಚ್‌.ಡಿ ಮಹಾಪ್ರಬಂಧದಲ್ಲಿ ಈ ಏಳೂ ಶೂರರ ಬಗ್ಗೆ ಕೆಲ ಮಾಹಿತಿ ಇವೆ. ಇದು ಹೊರತುಪಡಿಸಿದರೆ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ, ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರ ಮತ್ತು ಪುರಾತತ್ವ ಇಲಾಖೆಯಿಂದ ಮಾಹಿತಿ ಸಂಗ್ರಹಣೆ ನಡೆದಿಲ್ಲ.

ಕರಿ ನೀರಿನ ಶಿಕ್ಷೆಗೆ (ಕಾಳಾಪಾನಿ) ಗುರಿಯಾದ ಇತರ ಆರು ಮಂದಿಯನ್ನು ಅಂಡಮಾನ್‌– ನಿಕೋಬಾರ್‌ ದ್ವೀಪದ ಕಾಡಿನಲ್ಲಿ ಬಿಟ್ಟು ಬರಲಾಯಿತು. ಅವರು ಏನಾದರು, ಅವರ ವಂಶಸ್ಥರು ಯಾರು ಎಂಬ ಬಗ್ಗೆಯೂ ಮಾಹಿತಿ ಇಲ್ಲ.

‘ಸೇನಾನಿ ಸರ್ದಾರ್‌ ಗುರುಸಿದ್ಧಪ್ಪನ ಶೌರ್ಯ ಹಾಗೂ ಸಂಘಟನಾ ಚಾತುರ್ಯಕ್ಕೆ ಹೆದರಿದ ಬ್ರಿಟಿಷರು ಕೊನೆಯವರೆಗೂ ಯುದ್ಧಕೈದಿ ಆಗಿ ಉಳಿಸಿದರು. ಅವರ ಕೊನೆ ಹೇಗಾಯಿತು ಎಂಬ ಬಗ್ಗೆ ಕೂಡ ಸಂಶೋಧನೆಗಳು ನಡೆಯಬೇಕಿದೆ’ ಎಂದು ಇತಿಹಾಸ ಆಸಕ್ತರು ಹೇಳುತ್ತಾರೆ.

ಮರಗಳ ಸಂರಕ್ಷಣೆ ಆಗಲಿ: ‘ಖಾನಾಪುರ ತಾಲ್ಲೂಕಿನ ನಂದಗಡ ಗ್ರಾಮಕ್ಕೆ ಬಂದರೆ ಎರಡು ಆಲದ ಮರಗಳನ್ನು ಕಾಣುತ್ತೇವೆ. ರಾಯಣ್ಣನನ್ನು ನೇಣು ಹಾಕಿದ ಮರ ಮತ್ತು ಅವನ ಸಮಾಧಿ ಬಳಿ ನೆಟ್ಟ ಮರ. ಸಮಾಧಿಯ ಬಳಿ ಬೆಳೆದ ಮರದಲ್ಲೇ ನೇಣಿಗೇರಿಸಲಾಯಿತು ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಸಮಾಧಿಯಿಂದ ಎರಡು ಕಿ.ಮೀ. ದೂರದಲ್ಲಿನ ಮರದಲ್ಲಿ ನೇಣಿಗೇರಿಸಲಾಯಿತು. ಇದು ಹೆಚ್ಚು ಜನರಿಗೆ ಗೊತ್ತಿಲ್ಲ’ ಎನ್ನುತ್ತಾರೆ ಅವರು.

ಖಾನಾಪುರ ತಾಲ್ಲೂಕಿನ ನಂದಗಡ ಹೊರವಲಯದಲ್ಲಿ ಇರುವ ಸಂಗೊಳ್ಳಿ ರಾಯಣ್ಣ ಹಾಗೂ ಆರು ಸಹಚರರನ್ನು ಗಲ್ಲಿಗೇರಿಸಿದ ಆಲದ ಮರ

ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿಯಲ್ಲಿ ನಿರ್ಮಿಸಿದ ರಾಕ್ ಗಾರ್ಡನ್‌ನಲ್ಲಿ ಸಿದ್ಧಪಡಿಸಿದ ಆಕರ್ಷಕ ಕಲಾಕೃತಿಗಳು –ಪ್ರಜಾವಾಣಿ ಚಿತ್ರಗಳು/ ಗೋವಿಂದರಾಜ ಜವಳಿ
ಗಲ್ಲಿಗೇರಿದ ಮತ್ತು ಕರಿನೀರಿನ ಶಿಕ್ಷೆಗೆ ಗುರಿಯಾದವರ ಬಗ್ಗೆ ಸರ್ಕಾರ ಈಗಲಾದರೂ ಗಮನ ಹರಿಸಬೇಕು. ಕಿತ್ತೂರು ಕ್ರಾಂತಿಯಲ್ಲಿದ್ದ ಎಲ್ಲ ಸಮುದಾಯದರನ್ನೂ ಬೆಳಕಿಗೆ ತರಬೇಕು
-ಬಸವರಾಜ ಕಮತ, ಸಂಶೋಧಕ ಸಂಗೊಳ್ಳಿ
ರಾಯಣ್ಣನ ಸಮಾಧಿ ಬಳಿ ಆಲದ ಮರ ನೆಟ್ಟಿದ್ದು ನೇಣು ಹಾಕಿದ ಮರ ಗುರುತಿಸಿದ್ದು ಅವರ ಸಹಚರ ಬಿಚಗತ್ತಿ ಚನ್ನಬಸಪ್ಪ. ಉಳಿದ ಆರು ಜನರ ಸಮಾಧಿಗಳನ್ನು ಸರ್ಕಾರ ಪತ್ತೆ ಮಾಡಬೇಕಿದೆ.
-ಶಂಕರ ಡಿ. ಸೋನೊಳ್ಳಿ ಅಧ್ಯಕ್ಷ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಸಮಿತಿ ನಂದಗಡ

ರಾಯಣ್ಣನ ಜತೆಗೆ ಗಲ್ಲಿಗೇರಿದವರು

1) ಬಸ್ತವಾಡದ ಬಾಳನಾಯಕ 2) ಹಣಬರಟ್ಟಿಯ ಬಸಲಿಂಗಪ್ಪ 3) ಬೆಳವಡಿಯ ಕರಿಬಸಪ್ಪ 4) ಹೊಗರ್ತಿಯ ಭೀಮಾ ಜಿಡ್ಡೀಮನಿ 5) ಕೊಪ್ಪದ ಸಂಗ್ರೇಶ್‌ ಕೆಂಚಪ್ಪ 6) ಸುತಗಟ್ಟಿಯ ಅಪ್ಪೋಜಿ ನಾಯಕ ಕರಿ ನೀರಿನ ಶಿಕ್ಷೆಗೆ ಗುರಿಯಾದವರು 1) ಬೆಳವಡಿಯ ರುದ್ರನಾಯಕ ನೀಲನಾಕ 2) ಬೆಳವಡಿಯ ಯಲ್ಲಾನಾಯಕ 3) ತಿಗಡೊಳ್ಳಿಯ ಅಪ್ಪೋಣಿ 4) ಮಜ್ಜಿಗಡಾದ ರಾಣೋಜಿಕೊಂಡ 5) ತೋಪಿನಕಟ್ಟೆ ಕೊನೇರಿ 6) ಕೊಡಚವಾಡ ನೇಮಣ್ಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.