ಚಿಕ್ಕೋಡಿ: ಚಿಕ್ಕೋಡಿ ಪಟ್ಟಣ ಹಾಗೂ ತಾಲ್ಲೂಕಿನ ಅಂಕಲಿಯಲ್ಲಿ ಕಳೆದ ನ.9ರಂದು ಎಟಿಎಂ ದೋಚಿ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಬೀದರ್ ಜಿಲ್ಲಾ ಪೊಲೀಸರು ಬಂಧಿಸಿದ್ದು, ಚಿಕ್ಕೋಡಿ ಪೊಲೀಸರು ಗುರುವಾರ ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ.
ಹರಿಯಾಣ ಮೂಲದ ಶಾಹಿದ್ ಕಮಲಖಾನ್ (45), ಅಲೀಮ್ ಅಕ್ಬರ ಖಾನ್ (26), ಇಲಿಯಾಸ್ ಅಬ್ದುಲ್ ರೆಹಮಾನ್ ಖಾನ್ (45) ಬಂಧಿತರು.
ಚಿಕ್ಕೋಡಿ ಪಟ್ಟಣದಲ್ಲಿ ಎಸ್ಬಿಐ ಎಟಿಎಂ ಹಾಗೂ ಅಂಕಲಿ ಗ್ರಾಮದ ಎಕ್ಸಿಸ್ ಬ್ಯಾಂಕ್ ಎಟಿಎಂ ಗಳನ್ನು ಗ್ಯಾಸ್ ಕಟರ್ನಿಂದ ಒಡೆದು ₹23 ಲಕ್ಷಕ್ಕೂ ಹೆಚ್ಚು ಹಣವನ್ನು ದೋಚಿದ್ದರು. ಅಂದಿನಿಂದ ಚಿಕ್ಕೋಡಿ ಪೊಲೀಸರು ಕಳ್ಳರಿಗಾಗಿ ಬಲೆ ಬೀಸಿದ್ದರು. ಬೀದರ್ ಜಿಲ್ಲೆಯ ಹಳ್ಳಿಖೇಡ ಪಟ್ಟಣದಲ್ಲಿ ಎಟಿಎಂ ಒಡೆಯುವಾಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಹರಿಯಾಣ ರಾಜ್ಯಗಳಲ್ಲಿ 12 ಎಟಿಎಂಗಳಲ್ಲಿ ಬಂಧಿತ ಆರೋಪಿಗಳು ಕಳವು ಮಾಡಿದ್ದರು. ಚಿಕ್ಕೋಡಿ, ಅಂಕಲಿ ಠಾಣೆ ಪೊಲೀಸರು ಕಳೆದ ನಾಲ್ಕು ತಿಂಗಳಿನಿಂದ ಎಟಿಎಂ ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದರು. ಬಂಧಿತರಿಂದ ₹9.5 ಲಕ್ಷ ನಗದು, ₹15 ಲಕ್ಷ ಮೌಲ್ಯದ ಕಾರ್, ಕಳ್ಳತನಕ್ಕೆ ಬಳಸುತ್ತಿದ್ದ ಆಕ್ಸಿಜನ್ ಸಿಲಿಂಡರ್, ಗ್ಯಾಸ್ ಸಿಲಿಂಡರ್, ವಿವಿಧ ನಂಬರ್ ಪ್ಲೇಟ್ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.