ಬೆಳಗಾವಿ: ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಜಿಲ್ಲೆಯಲ್ಲಿ ಸೋಮವಾರ ಶ್ರದ್ಧಾ–ಭಕ್ತಿಯಿಂದ ಆಚರಿಸಲು ಮುಸ್ಲಿಮರು ಸಜ್ಜಾಗಿದ್ದಾರೆ.
ಇಲ್ಲಿನ ನ್ಯಾಯಾಲಯ ಆವರಣದ ಬಳಿ ಇರುವ ಈದ್ಗಾ ಮೈದಾನ, ಕೋಟೆ ಆವರಣದಲ್ಲಿರುವ ಹಳೆಯ ಮಸೀದಿ ಸೇರಿದಂತೆ ನಗರದ ಎಲ್ಲ ಮಸೀದಿಗಳಲ್ಲಿ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆಗೆ ವ್ಯವಸ್ಥೆ ಮಾಡಲಾಗಿದೆ. ಸಕಲ ಜೀವರಾಶಿ ಒಳಿತಿಗಾಗಿ ಪ್ರಾರ್ಥಿಸಲಿರುವ ಮುಸ್ಲಿಮರು, ಕುರ್ಬಾನಿ(ಪ್ರಾಣಿಬಲಿ) ನೀಡಿ ಭಕ್ತಿ ಮೆರೆಯಲಿದ್ದಾರೆ.
ಹಬ್ಬದ ಮುನ್ನಾದಿನವಾದ ಭಾನುವಾರ, ಇಲ್ಲಿನ ಖಡೇಬಜಾರ್, ಖಂಜರ್ ಗಲ್ಲಿ, ಗಣಪತ ಗಲ್ಲಿ ಮತ್ತಿತರ ಮಾರುಕಟ್ಟೆ ಪ್ರದೇಶಗಳಲ್ಲಿ ಖರೀದಿ ಭರಾಟೆ ಜೋರಾಗಿತ್ತು. ಸಿಹಿಖಾದ್ಯವಾದ ‘ಶಿರ್–ಕುರ್ಮಾ’ ತಯಾರಿಕೆಗೆ ಬೇಕಿರುವ ಶಾವಿಗೆ, ಒಣಹಣ್ಣುಗಳನ್ನು ಜನರು ಉತ್ಸಾಹದಿಂದ ಖರೀದಿಸುತ್ತಿರುವುದು ಕಂಡುಬಂತು.
‘ಬಕ್ರೀದ್ ಹಿನ್ನೆಲೆಯಲ್ಲಿ ನಗರದ ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಜನರು ಶಾಂತಿಯುತವಾಗಿ ಹಬ್ಬ ಆಚರಿಸಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕು’ ಎಂದು ನಗರ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.