ADVERTISEMENT

ಬೆಳಗಾವಿ: ಕಳಸಾ–ಬಂಡೂರಿ ಯೋಜನೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2024, 12:18 IST
Last Updated 5 ಅಕ್ಟೋಬರ್ 2024, 12:18 IST
   

ಬೆಳಗಾವಿ: ‘ಕಳಸಾ–ಬಂಡೂರಿ ನಾಲಾ ಯೋಜನೆ ಅನುಷ್ಠಾನ ಪರಿಸರಕ್ಕೆ ಮಾರಕವಾಗಲಿದೆ. ಇದರ ಬಗ್ಗೆ ಮಹದಾಯಿ ಜಲವಿವಾದ ನ್ಯಾಯಾಧಿಕರಣ ನೀಡಿದ ತೀರ್ಪು ಕೂಡ ಅವೈಜ್ಞಾನಿಕವಾಗಿದೆ’ ಎಂದು ವಿವಿಧ ಪರಿಸರ ಸಂಘಟನೆಗಳ ಕಾರ್ಯಕರ್ತರು ಜಂಟಿ ಹೇಳಿಕೆ ನೀಡಿದರು.

ಪರ್ಯಾವರಣಿ, ಪರಿಸರಕ್ಕಾಗಿ ನಾವು, ಪರಿವರ್ತನಾ, ಗ್ರಾಕೂಸ್‌ ಹಾಗೂ ಜಾಗೃತಿ ಮಹಿಳಾ ಒಕ್ಕೂಟದ ಪದಾಧಿಕಾರಿಗಳು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಒಕ್ಕೊರಲಿನಿಂದ ಯೋಜನೆಗೆ ವಿರೋಧ ವ್ಯಕ್ತಪಡಿಸಿದರು.

ನಿತಿನ್ ಧೋಂಡ ಮಾತನಾಡಿ, ‘ನ್ಯಾಯಾಧಿಕರಣದ ತೀರ್ಪಿನ ಪ್ರಕಾರ, ಕುಡಿಯುವ ನೀರಿನ ಅಗತ್ಯತೆ ಪೂರೈಸಲು ಮಲಪ್ರಭಾ ನದಿಗೆ ಸುಮಾರು 3.94 ಟಿಎಂಸಿ ಅಡಿ ನೀರನ್ನು ತಿರುಗಿಸಲಾಗುವುದು. ಆದರೆ, ಈ ಯೋಜನೆಯಡಿ ಅಣೆಕಟ್ಟು, ಕಾಲುವೆಗಳ ನಿರ್ಮಾಣದಿಂದ ಅರಣ್ಯಕ್ಕೆ ಹಾನಿಯಾಗಲಿದೆ. 2 ಲಕ್ಷಕ್ಕೂ ಹೆಚ್ಚು ಮರ ಕಡಿಯಲಿದ್ದು, ಹುಲಿ ಕಾರಿಡಾರ್ ಸೇರಿದಂತೆ ಅಭಯಾರಣ್ಯಗಳಿಗೆ ತೊಂದರೆಯಾಗಲಿದೆ’ ಎಂದರು.

ADVERTISEMENT

‘ಮಲಪ್ರಭಾ ನದಿಪಾತ್ರದಲ್ಲಿರುವ ಮತ್ತು ಹುಬ್ಬಳ್ಳಿ–ಧಾರವಾಡದ ಜನರ ಕುಡಿಯುವ ನೀರಿನ ಅವಶ್ಯಕತೆ ಈಡೇರಿಸುವುದಾಗಿ ಎಲ್ಲ ರಾಜಕೀಯ ಪಕ್ಷಗಳು ಭರವಸೆ ನೀಡಿವೆ. ಹಾಗಾಗಿ ಈ ಓಜನೆ ಅನುಷ್ಠಾನವು ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಇದು ಕುಡಿಯುವ ನೀರಿನ ಯೋಜನೆಯಾಗಿದೆ. ಆದರೆ, ರೈತರಿಗೂ ಕೃಷಿ ಅಗತ್ಯಗಳನ್ನು ಪೂರೈಸಿಕೊಳ್ಳಲು ನೀರು ಸಿಗುತ್ತದೆ’ ಎಂದು ಅವರು ಹೇಳಿದರು.

‘ನ್ಯಾಯಾಧಿಕರಣದ ವಿಚಾರಣೆ ವೇಳೆ, ನಮ್ಮ ಅಭಿಪ್ರಾಯ ತಿಳಿಸಲು ಪ್ರಯತ್ನಿಸಿದರೂ ಅವರು ಕೇಳಲಿಲ್ಲ. ಈ ಯೋಜನೆ ಅನುಷ್ಠಾನಗೊಂಡರೆ ಉತ್ತರ ಕರ್ನಾಟಕಕ್ಕೆ ಮಳೆಯ ಮೂಲವಾಗಿರುವ ಪಶ್ಚಿಮಘಟ್ಟ ಪ್ರದೇಶ ವಿನಾಶವಾಗಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಬೆಳಗಾವಿಯಿಂದ ಗೋವಾವರೆಗಿನ ಅರಣ್ಯ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ರೆಸಾರ್ಟ್‌ಗಳು ಇರುವುದರಿಂದ ಪರಿಸರದ ಮೇಲೆ ಉಂಟಾಗುವ ಪರಿಣಾಮದ ಬಗ್ಗೆ ಪ್ರತಿಕ್ರಿಯಿಸಲು ಪರಿಸರವಾದಿಗಳು ನಿರಾಕರಿಸಿದರು.

ದಿಲೀಪ ಕಾಮತ್‌, ಶಾರದಾ ಗೋಪಾಲ, ನೈಲಾ ಕೊಹೆಲೊ, ಶಿವಾಜಿ ಕಾಗಣಿಕರ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.