ADVERTISEMENT

ಬೆಳಗಾವಿ | ವರದಕ್ಷಿಣೆ ಕಿರುಕುಳ: ಮಹಿಳೆ ಆತ್ಮಹತ್ಯೆ ಯತ್ನ

​ಪ್ರಜಾವಾಣಿ ವಾರ್ತೆ
Published 16 ಜುಲೈ 2024, 5:14 IST
Last Updated 16 ಜುಲೈ 2024, 5:14 IST
   

ಬೆಳಗಾವಿ: ವರದಕ್ಷಿಣೆ ಕಿರುಕುಳ ಬೇಸತ್ತ 20 ವರ್ಷದ ಗೃಹಿಣಿಯೊಬ್ಬರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದಲ್ಲಿ ಸೋಮವಾರ ನಡೆದಿದೆ.

ವಿಷ ಕುಡಿದು ನಿತ್ರಾಣಗೊಂಡಿದ್ದ ಗೃಹಿಣಿಯನ್ನು ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ ಮಹಿಳೆ ತನ್ನ ಪತಿ, ಅತ್ತೆ ಹಾಗೂ ಪತಿಯ ಸೋದರಮಾವನ ಮೇಲೆ ಆರೋಪ ಮಾಡಿದ್ದಾರೆ.

‘ನನ್ನ ಪತಿ ಬಿಇ ಪಾಸ್‌ ಮಾಡಿದ್ದೇನೆ, ಎಂಜಿನಿಯರ್‌ ಇದ್ದೇನೆ ಎಂದು ಸುಳ್ಳು ಹೇಳಿ ಮದುವೆಯಾದ. ಆದರೆ, ಅವನು ಈಗ ಯಾವುದೋ ಕೋರ್ಸ್‌ ಕಲಿಯಲು ಬೆಂಗಳೂರಿಗೆ ಹೋಗಿದ್ದಾನೆ. ಮದುವೆ ಆದಾಗಿನಿಂದ ಇಲ್ಲಿಯವರೆಗೆ ₹ 7 ಲಕ್ಷ ನಗದು, ಚಿನ್ನಾಭರಣಗಳನ್ನು ವರದಕ್ಷಿಣೆ ನೀಡಿದ್ದೇವೆ. ಆದರೂ ವರದಕ್ಷಿಣೆಗಾಗಿ ದಿನವೂ ಹೊಡೆದು– ಬಡಿದು ಕಿರುಕುಳ ನೀಡುತ್ತಿದ್ದಾರೆ. ಈಗ ಹಣಕ್ಕಾಗಿಯೇ ನನ್ನ ಮನೆಯಿಂದ ಹೊರಹಾಕಿದ್ದಾರೆ’ ಎಂದು ಮಹಿಳೆ ಆರೋಪಿಸಿದ್ದಾರೆ.

ADVERTISEMENT

‘ನನ್ನ ಪತಿಯ ಸೋದರಮಾವನೇ ನಮ್ಮ ಕುಟುಂಬದಲ್ಲಿ ಬಿರುಕು ಮೂಡಿಸಿದ್ದಾನೆ. ಪದೇಪದೇ ನಮ್ಮ ಮನೆಗೆ ಬರುತ್ತಿದ್ದ. ಇವರೆಲ್ಲ ದೌರ್ಜನ್ಯದ ಬಗ್ಗೆ ನಾನು ನಗರ ಪೊಲೀಸ್‌ ಕಮಿಷನರ್‌ ಕಚೇರಿಗೆ ಪತ್ರ ಬರೆದಿದ್ದೆ’ ಎಂದೂ ಹೇಳಿದ್ದಾರೆ.

ಮಹಿಳಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.