ಬೆಳಗಾವಿ: ಶಂಕಿತ ಡೆಂಗಿ ಜ್ವರದಿಂದ ಬಳಲುತ್ತಿದ್ದ ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರ ಪಟ್ಟಣದ 11 ವರ್ಷದ ಬಾಲಕಿ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಗುರುವಾರ ಮೃತಪಟ್ಟಿದ್ದಾಳೆ.
ಶ್ರೇಯಾ ಕೃಷ್ಣ ದಾವದಾಟೆ (11) ಮೃತ ಬಾಲಕಿ. ಜುಲೈ 8ರಂದು ತೀವ್ರ ಜ್ವರ ಕಾಣಿಸಿಕೊಂಡ ಕಾರಣ ಸಂಕೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಬಾಲಕಿಗೆ ಡೆಂಗಿ ಲಕ್ಷಣಗಳು ಇರುವ ಕಾರಣ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕರೆತರಲಾಗಿತ್ತು. ಗುರುವಾರ ಕೊನೆಯುಸಿರೆಳೆದಳು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ್ ಕೋಣಿ, ‘ಬಾಲಕಿಯ ರಕ್ತದ ಮಾದರಿಗಳನ್ನು ರ್ಯಾಪಿಡ್ ಪರೀಕ್ಷೆ ಮಾಡಿಸಿದಾಗ ಡೆಂಗಿ ತಗುಲಿದ್ದು ಗೊತ್ತಾಗಿದೆ. ಆದರೆ, ಬೆಳಗಾವಿಯ ಪ್ರಯೋಗಾಲಯದಲ್ಲಿ ಪಿಸಿಆರ್ ತಪಾಸಣೆ ಮಾಡಿದ ಕಾಲಕ್ಕೆ ನೆಗೆಟಿವ್ ಬಂದಿದೆ. ಟಾಯಿಫೈಡ್ ಹಾಗೂ ಸೆಪ್ಟಿಮಿಯಾ ಎಂಬ ಕಾಯಿಲೆಗಳು ಅಂಟಿಕೊಂಡಿದ್ದವು. ಚಿಂತಾಜನಕ ಸ್ಥಿತಿಯಲ್ಲಿದ್ದ ಬಾಲಕಿಗೆ ವೆಂಟಿಲೇಟರ್ ನೆರವು ನೀಡಲಾಗಿತ್ತು. ಆದರೂ ಚಿಕಿತ್ಸೆಗೆ ಸ್ಪಂದಿಸದೇ ಸವಾಲಾಗಿದೆ’ ಎಂದರು.
‘ಈವರೆಗೆ ಜಿಲ್ಲೆಯಲ್ಲಿ 1,500 ಶಂಕಿತ ಡೆಂಗಿ ಪ್ರಕರಣಗಳ ಪರೀಕ್ಷೆ ಮಾಡಲಾಗಿದ್ದು, 209 ಮಂದಿಗೆ ಮಾತ್ರ ಸೋಂಕು ದೃಢಪಟ್ಟಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.