ನಿಪ್ಪಾಣಿ: ‘ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿಯಿಂದ ರಾಜ್ಯವ್ಯಾಪಿ ಶುಕ್ರವಾರ ಜೂನ್ 21ರಂದು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಅಂದು ಬೆಳಿಗ್ಗೆ 9.30ಕ್ಕೆ ನಗರದ ಸಂಭಾಜಿ ವೃತ್ತದಿಂದ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗುವುದು’ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ಬುಧವಾರ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದು ಸುಮಾರು ಒಂದು ವರ್ಷ ಕಳೆದರೂ ಅಭಿವೃದ್ಧಿ ಪಡಿಸಲು ಇನ್ನೂವರೆಗೆ ಯಾವೊಬ್ಬ ಶಾಸಕರಿಗೆ ಅನುದಾನ ಬಂದಿಲ್ಲ. ಇದರಿಂದ ಕೆಲಸಗಳಾಗುತ್ತಿಲ್ಲ, ಅಭಿವೃದ್ಧಿಯಾಗುತ್ತಿಲ್ಲ, ಹೊರತಾಗಿ ರಾಜ್ಯದ ಜನತೆ ಮೇಲೆ ರಾಜ್ಯ ಸರ್ಕಾರವು ಹೆಚ್ಚುವರಿ ಶುಲ್ಕದ ಭಾರ ಹಾಕುತ್ತಿದೆ. ಈಚೆಗೆ ಹೊರಬಿದ್ದ ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಪೆಟ್ರೋಲ್ ಮತ್ತು ಡೀಜೆಲ ದರ ಹೆಚ್ಚಳ ಮಾಡಿರುವುದು ಗಾಯದ ಮೇಲೆ ಬರೆ ಎಳೆಯಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಕಾಂಗ್ರೆಸ್ ಸರ್ಕಾರವು ಕರ್ನಾಟಕ ಮಹರ್ಷಿ ವಾಲ್ಮಿಕಿ ಪರಿಶಿಷ್ಠ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ₹187 ಕೋಟಿಗಳ ಭ್ರಷ್ಟಾಚಾರ ಮಾಡಿದೆ. ನಿಗಮದ ಯೋಜನೆಗಳು ಪಂಗಡದ ಅರ್ಹ ಫಲಾನುಭವಿಗಳಿಗೆ ತಲುಪಲಿಲ್ಲ. ಈ ಕುರಿತು ರಾಜ್ಯದಲ್ಲಿ ಬಿಜೆಪಿ ಪಕ್ಷವು ಪ್ರತಿಭಟನೆ ನಡೆಸಿದ ನಂತರ ಸಚಿವರು ರಾಜೀನಾಮೆ ನೀಡಿದ್ದಾರೆ’ ಎಂದು ಆರೋಪಿಸಿದರು.
‘ಸಂಭಾಜಿ ವೃತ್ತದಿಂದ ಆರಂಭಗೊಳ್ಳಲಿರುವ ಪ್ರತಿಭಟನಾ ರ್ಯಾಲಿಯು ಕಿತ್ತೂರ ರಾಣಿ ಚನ್ನಮ್ಮ ವೃತ್ತ, ಕೋಠಿವಾಲೆ ವೃತ್ತ, ನೆಹರು ಚೌಕ್, ಛತ್ರಪತಿ ಶಿವಾಜಿ ಮಹಾರಾಜ ಚೌಕ್, ಬೆಳಗಾವಿ ನಾಕಾ ಮೂಲಕ ಹಾಯ್ದು ತಹಶೀಲ್ದಾರ ಕಛೇರಿಗೆ ತೆರಳಿ ಕೊನೆಗೊಳ್ಳಲಿದೆ’ ಎಂದು ಮಾಹಿತಿ ನೀಡಿದರು.
ಸೂರಜ ಖವರೆ, ಸಿದ್ಧು ನರಾಟೆ, ರಾಜೇಂದ್ರ ಗುಂದೇಶಾ, ಜಯವಂತ ಭಾಟಲೆ, ಕಾವೇರಿ ಮಿರ್ಜೆ, ಪ್ರಣವ ಮಾನವಿ, ಮೊದಲಾದವರು ಸೇರಿದಂತೆ ನಗರಸಭೆ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.