ADVERTISEMENT

ಬೆಳಗಾವಿ: ಯುವಕನ ಮಿದುಳು ನಿಷ್ಕ್ರಿಯ, ನಾಲ್ವರಿಗೆ ಅಂಗಾಂಗ ದಾನ

​ಪ್ರಜಾವಾಣಿ ವಾರ್ತೆ
Published 22 ಜುಲೈ 2022, 10:57 IST
Last Updated 22 ಜುಲೈ 2022, 10:57 IST
ಮಿದುಳು ನಿಷ್ಕ್ರಿಯಗೊಂಡಿದ್ದ ಯುವಕನ ಅಂಗಾಂಗಗಳನ್ನು ಬೆಳಗಾವಿಯ  ಕೆಎಲ್‌ಇಎಸ್‌ ಆಸ್ಪತ್ರೆಯ ಸಿಬ್ಬಂದಿ ಬೇರೆಡೆ ಸಾಗಿಸಿದರು
ಮಿದುಳು ನಿಷ್ಕ್ರಿಯಗೊಂಡಿದ್ದ ಯುವಕನ ಅಂಗಾಂಗಗಳನ್ನು ಬೆಳಗಾವಿಯ ಕೆಎಲ್‌ಇಎಸ್‌ ಆಸ್ಪತ್ರೆಯ ಸಿಬ್ಬಂದಿ ಬೇರೆಡೆ ಸಾಗಿಸಿದರು   

ಬೆಳಗಾವಿ: ರಸ್ತೆ ಅಪಘಾತದಲ್ಲಿ ಗಾಯಗೊಂಡು ಮಿದುಳು ನಿಷ್ಕ್ರಿಯಗೊಂಡಿದ್ದ ಯುವಕನ ಅಂಗಾಂಗಗಳನ್ನು ನಾಲ್ವರಿಗೆ ದಾನ ಮಾಡಲಾಗಿದೆ. ಇಲ್ಲಿನ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಯುವಕನ ಹೃದಯವನ್ನು ಇನ್ನೊಬ್ಬರಿಗೆ ಯಶಸ್ವಿಯಾಗಿ ಕಸಿ ಮಾಡಲಾಯಿತು.

ಖಾನಾ‍ಪುರ ತಾಲ್ಲೂಕಿನ ಜಾಂಬೋಟಿ ಹತ್ತಿರದ ಅಮಟೆ ಗ್ರಾಮದ ನಿವಾಸಿ ಸಹದೇವ ಅರ್ಜುನ ಗಾಂವಕರ (26) ಎಂಬ ಯುವಕ ಈಚೆಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೆಂದ್ರಕ್ಕೆ ದಾಖಲಿಸಲಾಗಿತ್ತು. ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಮಿದುಳು ನಿಷ್ಕ್ರಿಯಗೊಂಡಿತ್ತು. ಯುವಕನ ಪಾಲಕರ ಮನವೊಲಿಸಿದ ಆಸ್ಪತ್ರೆ ವೈದ್ಯರು ಅಂಗಾಂಗ ದಾನ ಮಾಡಲು ಪ್ರೇರೇಪಿಸಿದರು.

ಆಸ್ಪತ್ರೆಯಲ್ಲಿ ದಾಖಲಾದ ಹೃದ್ರೋಗಿ ಒಬ್ಬರಿಗೆ ಹೃದಯವನ್ನು ಶುಕ್ರವಾರ ಕಸಿ ಮಾಡಲಾಯಿತು. ಯುವಕನ ಜಠರನ್ನು ಹುಬ್ಬಳ್ಳಿ ವಿಮಾನ ನಿಲ್ದಾಣದವರೆಗೆ ಝೀರೋ ಟ್ರಾಫಿಕ್‌ನಲ್ಲಿ ಸಾಗಿಸಿ, ಅಲ್ಲಿಂದ ವಿಮಾನದ ಮೂಲಕ ಬೆಂಗಳೂರಿನ ಬಿಜಿಎಸ್ ಗ್ಲೋಬಲ್‌ ಆಸ್ಪತ್ರೆಗೆ ಒಯ್ಯಲಾಯಿತು. ಎರಡೂ ಕಿಡ್ನಿಗಳನ್ನು ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ಸಾಗಿಸಲಾಯಿತು ಆಸ್ಪತ್ರೆಯ ವೈದ್ಯರು ತಿಳಿಸಿದರು.

ADVERTISEMENT

ನಗರದ ವಿಜಯಾ ಆಸ್ಪತ್ರೆಯ ಡಾ.ರವಿ ಪಾಟೀಲ ಅವರ ತಂಡ, ಅಮಟೆ ಗ್ರಾಮದ ಹಿರಿಯ ಅರ್ಜುನ ಕಸಲೇಕರ, ಅಭಿಮನ್ಯು ಡಾಗಾ, ವಿಜಯ್‌, ಡಾ.ಬಸವರಾಜ ಬಿಜ್ಜರಗಿ ಅವರು ಅಂಗಾಂಗ ದಾನ ಮಾಡಲು ಪ್ರೇರೇಪಿಸಿದರು.

ಮಗನ ಅಂಗಾಂಗ ದಾನ ಮಾಡಿ ನಾಲ್ವರ ಪ್ರಾಣ ಉಳಿಸಿದ ಸಹದೇವ ಅವರ ತಂದೆ– ತಾಯಿಗೆ ಕೆಎಲ್‌ಇ ಸಂಸ್ಥೆಯ ಕಾರ‍್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ.ಜಾಲಿ ಹಾಗೂ ಆಡಳಿತ ಮಂಡಳಿ ಸದಸ್ಯರು ಕೃತಜ್ಞತೆ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.