ಹುಕ್ಕೇರಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಕಲ್ಯಾಣ ಸಂಸ್ಥೆ, ಕರಗುಪ್ಪಿಯ ನಮ್ಮೂರ ಬಾನುಲಿ ಸಮುದಾಯ ರೇಡಿಯೊ ಕೇಂದ್ರದ ಆಶ್ರಯದಲ್ಲಿ ಪಟ್ಟಣದ ವಿರಕ್ತಮಠದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಗ್ರಾಮೀಣ ಭಾಗದ ಕಿಶೋರಿಯರಿಗೆ ಚರ್ಚಾ ಸ್ಪರ್ಧೆ ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಿ.ಎ.ಕರಗುಪ್ಪಿ ಮಾತನಾಡಿ, ‘ನವ ವಿವಾಹಿತರು ಕುಟುಂಬ ಯೋಜನಾ ವಿಧಾನಗಳ ಬಗ್ಗೆ ಸ್ಥಳೀಯ ಆರೋಗ್ಯ ಸಂಸ್ಥೆಗಳಿಗೆ ಸಂಪರ್ಕಿಸಿ ಮಾಹಿತಿ ಪಡೆಯಬೇಕು’ ಎಂದರು.
‘ಜನಸಂಖ್ಯೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಕಿಶೋರಿಯರಿಗೆ ಅರಿವು ಮೂಡಿಸುವುದು ಇಂದಿನ ಅಗತ್ಯ. ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಕಡಿಮೆಯಾಗದ ಬಾಲ್ಯವಿವಾಹ, ಲಿಂಗ ಅಸಮಾನತೆ, ಲೈಂಗಿಕ ಶೋಷಣೆ ಬಗ್ಗೆ ಅರಿವು ಮೂಡಿಸಬೇಕಾಗಿದೆ’ ಎಂದರು.
ತಾಲ್ಲೂಕಿನ ಕರ್ನಾಟಕ ಪಬ್ಲಿಕ್ ಶಾಲೆ ಯರಗಟ್ಟಿಯ ಕಿರಣ ಚೌಗಲಾ, ‘ಮಹಿಳಾ ಕಲ್ಯಾಣ ಸಂಸ್ಥೆಯು ಸಖಿ ಯೋಜನೆಯಡಿ ಕಿಶೋರಿಯರಿಗಾಗಿ ವಿವಿಧ ಕಾರ್ಯಕ್ರಮಗಳ ಮೂಲಕ ಜನಸಂಖ್ಯಾ ನಿಯಂತ್ರಣ, ಬಾಲ್ಯವಿವಾಹ, ಮಹಿಳೆಯರ ಮತ್ತು ಮಕ್ಕಳ ಮಾರಾಟ, ಲಿಂಗ ತಾರತಮ್ಯ ಕುರಿತು ನಿರಂತರವಾಗಿ ಅರಿವು ಮೂಡಿಸುತ್ತಿದೆ’ ಎಂದರು.
ಭಾಷಣ ಸ್ಪರ್ಧೆಯಲ್ಲಿ ಹುಕ್ಕೇರಿ ತಾಲ್ಲೂಕಿನ ವಿವಿಧ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿಜೇತರು: ಜಿ.ಎಚ್.ಎಸ್. ಅವರಗೋಳ ಸರ್ಕಾರಿ ಪ್ರೌಢಶಾಲೆಯ ಲಲಿತಾ ಓಂಕಾರ ಪ್ರಥಮ, ದ್ವಿತೀಯ ಸ್ಥಾನವನ್ನು ಜಿ.ಎಸ್.ಎಸ್.ಶಿರಗಾಂವ ಪ್ರೌಢಶಾಲೆಯ ಸುಮಾ ಪಂತೋಜಿ ದ್ವಿತೀಯ ಹಾಗೂ ಗುಡಸ್ ಬಿ.ಎಂ.ಅಮ್ಮಣಗಿ ಪ್ರೌಢಶಾಲೆಯ ಸೃಷ್ಟಿ ಭೂಸನ್ನವರ ತೃತೀಯ ಸ್ಥಾನ ಪಡೆದರು.
ಹುಲ್ಲೋಳಿ ಸರ್ಕಾರಿ ಪ್ರೌಢಶಾಲೆಯ ಅರ್ಚನಾ ತಂಗಡಿ, ಗುಡಸ್ ಬಿ.ಎಂ. ಅಮ್ಮಣಗಿ, ಪ್ರೌಢಶಾಲೆಯ ವರ್ಷ ಹೊನ್ನಾಗೋಳ ಹಾಗೂ ಅಮ್ಮಣಗಿ ಸರ್ಕಾರಿ ಪ್ರೌಢಶಾಲೆಯ ಲಕ್ಷ್ಮೀ ವಾಳಕಿ ಸಮಾಧಾನ ಬಹುಮಾನ ಪಡೆದರು.
ಶಿಕ್ಷಕ ಎ.ಬಿ. ಗೋಡಗೇರಿ, ಪ್ರಾಚಾರ್ಯ ಕಿರಣ ಚೌಗಲಾ, ಸುಗಂಧಾ ಅಲ್ಲೊಟ್ಟಿ ಸೇರಿದಂತೆ ಪಾಲಕರು, ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.