ADVERTISEMENT

ಚನ್ನಮ್ಮನ ಕಿತ್ತೂರು: ನಿಯಂತ್ರಣಕ್ಕೆ ಬಾರದ ಅಕ್ರಮ ಚಟುವಟಿಕೆ

ಪ್ರದೀಪ ಮೇಲಿನಮನಿ
Published 30 ಸೆಪ್ಟೆಂಬರ್ 2024, 5:09 IST
Last Updated 30 ಸೆಪ್ಟೆಂಬರ್ 2024, 5:09 IST
ಚನ್ನಮ್ಮನ ಕಿತ್ತೂರಿನ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಕಳ್ಳರ ಚಿತ್ರ
ಚನ್ನಮ್ಮನ ಕಿತ್ತೂರಿನ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಕಳ್ಳರ ಚಿತ್ರ   

ಚನ್ನಮ್ಮನ ಕಿತ್ತೂರು: ‘ಜೂಜಾಟ, ಮಟ್ಕಾ, ಪಡ್ಡೆ ಹುಡುಗರ ಕಿಡಿಗೇಡಿತನ ಹಾಗೂ ಮನೆ ಕಳ್ಳತನ ನಿಯಂತ್ರಿಸುವಲ್ಲಿ ಯಶಸ್ಸು ಕಾಣದ ಕಿತ್ತೂರು ಪೊಲೀಸರ ವರ್ತನೆ ಬಗ್ಗೆ ಸಾರ್ವಜನಿಕರಲ್ಲಿ ಅಸಮಾಧಾನ ಮಡುಗಟ್ಟಿದೆ’ ಎಂಬ ಆರೋಪಗಳು ಕೇಳಿಬರುತ್ತಿವೆ.

‘ಎತ್ತರದ ಪ್ರದೇಶ, ಹೊರವಲಯದ ಹೊಲದಲ್ಲಿರುವ ಮನೆಗಳು ಇಸ್ಪೀಟ್ ಅಡ್ಡೆಗಳಾಗಿ ಪರಿವರ್ತನೆಯಾದ ವಿಷಯ ಗುಟ್ಟಾಗೇನು ಉಳಿದಿಲ್ಲ. ಹಾಡುಹಗಲೇ ಮನೆ ಕಳ್ಳತನಗಳಾಗಿವೆ. ಕೆಲವು ಪ್ರಕರಣಗಳು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ದಾಖಲಾದ ಚಿತ್ರಗಳು ಸ್ಪಷ್ಟವಾಗಿದ್ದರೂ ಅದರಲ್ಲಿರುವ ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಇನ್ನೂ ಏಕೆ ಯಶಸ್ವಿಯಾಗಿಲ್ಲ’ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಾರೆ.

ಸಿ.ಸಿ.ಟಿ.ವಿ ಕಣ್ಗಾವಲು: 

‘ಐತಿಹಾಸಿಕ ಚನ್ನಮ್ಮನ ಕಿತ್ತೂರು ಪಟ್ಟಣದ ಜನನಿಬಿಡ ವರ್ತುಲ ತಾಣ ಮತ್ತು ಕೆಲವು ಪ್ರದೇಶಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಕಣ್ಗಾವಲು ಹಾಕಲಾಗಿದೆ. ಕೆಟ್ಟಿದ್ದ ಬಹುತೇಕ ಈ ಕ್ಯಾಮೆರಾಗಳನ್ನು ದುರಸ್ತಿ ಮಾಡಿಸಲಾಗಿದೆ. ಕೆಲವರು ವೈಯಕ್ತಿಕವಾಗಿ ಮನೆಗಳಿಗೆ ಕ್ಯಾಮೆರಾ ಅಳವಡಿಸಿಕೊಂಡಿದ್ದಾರೆ. ಕಳ್ಳರು, ಸಮಾಜಘಾತುಕ ಶಕ್ತಿಗಳು, ಬೀದಿ ಕಾಮಣ್ಣರು ಈ ವ್ಯವಸ್ಥೆ ಮುಂದೆ ಕಂಗಾಲು ಆಗಬೇಕಿದ್ದರು. ಆದರೂ,  ನಿರ್ಭಯವಾಗಿ ಅಪರಾಧಿಕ ಕೃತ್ಯಗಳನ್ನು ಎಸಗಿ, ನಿರಾತಂಕವಾಗಿ ಓಡಾಡುತ್ತಿದ್ದಾರೆ’ ಎಂದು ದೂರುತ್ತಾರೆ.

ADVERTISEMENT

ವಿವಿಧೆಡೆ ಕಳ್ಳತನ: ‘ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಳಿ ವಾಸವಾಗಿರುವ ಡಾ.ಚಂದ್ರು ಪೊಲೀಸ್‌ಪಾಟೀಲ ಅವರ ಮನೆಯಲ್ಲಿ ಕೆಲವು ತಿಂಗಳ ಹಿಂದೆ ಹಾಡುಹಗಲೇ ಚಿನ್ನಾಭರಣ ದೋಚಿಕೊಂಡು ಕಳ್ಳರು ಪರಾರಿಯಾಗಿದ್ದರು. 80 ದಿನಗಳ ಹಿಂದೆ ವಿದ್ಯಾಗಿರಿಯಲ್ಲೂ ವರ್ತಕ ಶಂಕರ ಇಟಗಿ ಅವರಿಗೆ ಸೇರಿದ ಮನೆಯಲ್ಲಿ ಹಿಂದಿನ ಬಾಗಿಲು ಒಡೆದು ಚಿನ್ನಾಭರಣ, ನಗದು ದೋಚಿಕೊಂಡು ಹೋಗಲಾಗಿತ್ತು. ಇದರಲ್ಲಿ ಭಾಗವಹಿಸಿದ್ದ ಕಳ್ಳರ ಚಿತ್ರಗಳು ಹಾಗೂ ಕಳ್ಳತನಕ್ಕೆ ಉಪಯೋಗಿಸಿದ್ದ ಕಾರು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದರೂ, ಅವರ ಪತ್ತೆಗೆ ಪೊಲೀಸರು ವಿಫಲರಾಗಿದ್ದಾರೆ. ಇದು ನಮ್ಮ ಅನುಮಾನಕ್ಕೆ ಕಾರಣವಾಗಿದೆ’ ಎನ್ನುತ್ತಾರೆ ಸಾರ್ವಜನಿಕರು.

ಚನ್ನಮ್ಮನ ಕಿತ್ತೂರಿನ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಕಳ್ಳರು ಕೃತ್ಯಕ್ಕೆ ಬಳಿಸಿದ ಕಾರು

ವಿದ್ಯಾರ್ಥಿನಿಯರಿಗೂ ಸಂಕಷ್ಟ: ‘ಕಾಲೇಜು ಬಿಟ್ಟ ವೇಳೆ ಇಲ್ಲಿಯ ಮುಖ್ಯ ಬಸ್ ನಿಲ್ದಾಣದಲ್ಲಿ ಬೀದಿ ಕಾಮಣ್ಣರ ಹಾವಳಿ ಹೆಚ್ಚಾಗಿದೆ ಎಂಬ ದೂರು ಸಾಮಾನ್ಯವಾಗಿವೆ. ಈ ವಿಷಯವನ್ನು ಪೊಲೀಸರ ಗಮನಕ್ಕೆ ತಂದರೂ ಉಪಟಳ ನಿಂತಿಲ್ಲ’ ಎಂದು ನಾಗರಿಕರು ದೂರುತ್ತಾರೆ.

‘ನಮ್ಮ ದೂರು ಆಧರಿಸಿ, ಇತ್ತೀಚೆಗೆ ಕ್ಯಾಮೆರಾ ವ್ಯವಸ್ಥೆ ಮಾಡಲಾಗಿದೆ. ಆದರೆ, ಕಿಡಿಗೇಡಿಗಳ ಹಾವಳಿಗೆ ಬ್ರೇಕ್‌ ಬೀಳುವುದು ಯಾವಾಗ?’ ಎಂಬುದು ವಿದ್ಯಾರ್ಥಿನಿಯರ ಪ್ರಶ್ನೆ.

ವಿದ್ಯಾಗಿರಿಯಲ್ಲಿ ಮನೆ ಕಳ್ಳತನವಾದ ನಂತರ ಕಳ್ಳರ ಪತ್ತೆಗೆ ತಂಡ ರಚಿಸಲಾಗಿತ್ತು. ಕೆಲವು ಸುಳಿವು ಸಿಕ್ಕಿದೆ. ಆರೋಪಿಗಳನ್ನು ತ್ವರಿತವಾಗಿ ಬಂಧಿಸಲಾಗುವುದು
ರವಿ ನಾಯಕ ಡಿವೈಎಸ್‌ಪಿ ಬೈಲಹೊಂಗಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.