ಸವದತ್ತಿ: ತಾಲ್ಲೂಕಿನ ಬೆಡಸೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಣ ಇಲಾಖೆಯಿಂದ ಎಸ್ಎಸ್ಎಲ್ಸಿ ಮಕ್ಕಳ ಕಲಿಕಾ ಸಾಮರ್ಥ್ಯ ಉತ್ತೇಜನ ಮತ್ತು ಮಕ್ಕಳಲ್ಲಿ ಪರೀಕ್ಷಾ ಭಯ ಹೋಗಲಾಡಿಸುವ ಕುರಿತು ಪಾಲಕರ ಸಭೆ ಜರುಗಿತು.
ಬಿಇಒ ಮೋಹನ ದಂಡಿನ ಮಾತನಾಡಿ, ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಬಿಸಿಯೂಟ ಹಾಗೂ ಇತ್ಯಾದಿ ಯೋಜನೆ ನೀಡಿ ಶೈಕ್ಷಣಿಕ ಮಟ್ಟ ಸುಧಾರಿಸಲು ಸರ್ಕಾರ ಕಾಳಜಿ ವಹಿಸಿದೆ ಎಂದರು.
ಶೈಕ್ಷಣಿಕ ಪ್ರಗತಿಯಲ್ಲಿ ಪಾಲಕರ ಸಹಕಾರ ಅತ್ಯವಶ್ಯ. ಮಕ್ಕಳ ಹಾಜರಾತಿ ಮೇಲೆ ನಿಗಾವಹಿಸಿ, ಪಠ್ಯ ಸೇರಿ ಪಠ್ಯೇತರಗಳಲ್ಲಿಯೂ ಮಕ್ಕಳು ಪಾಲ್ಗೊಳ್ಳುವಂತೆ ಪ್ರೋತ್ಸಾಯಿಸಬೇಕು ಎಂದರು.
ಪರೀಕ್ಷಾ ಅಕ್ರಮಗಳ ತಡೆಯಲು ಸಿಸಿ ಟಿವಿ ಕ್ಯಾಮೆರಾ ಅಳವಡಿಕೆಗೆ ಸರ್ಕಾರದ ನಿರ್ಧಾರ ಉತ್ತಮ ಬೆಳವಣಿಗೆ. ಇದರಿಂದ ಮಕ್ಕಳಲ್ಲಿರುವ ದುಗುಡ ದೂರಾಗಿ ಅಭ್ಯಸಿಸುವ ಛಲ ವೃದ್ಧಿಸುತ್ತದೆ ಎಂದರು.
ಪಿಡಿಒ ಸುಧೀರ ಪತ್ತಾರ ಮಾತನಾಡಿ, ಗ್ರಾಮದ ಜೊತೆಗೆ ಗ್ರಾಮೀಣ ಶಾಲೆಗಳ ಅಭಿವೃದ್ಧಿಗೂ ಒತ್ತು ನೀಡಿದೆ. ನರೇಗಾದಡಿ ಶಾಲಾ ಆವರಣದಲ್ಲಿ ಸುಸಜ್ಜಿತ ಮೈದಾನ, ಸುತ್ತುಗೋಡೆ, ಫೇವರ್ಸ್ ಅಳವಡಿಕೆ, ಆಸನ ವ್ಯವಸ್ಥೆ, ಶೌಚಾಲಯ ಸೇರಿ ಅಗತ್ಯತೆಗೆ ತಕ್ಕಂತೆ ಕಾಮಗಾರಿ ನಡೆದಿವೆ. ಪಂಚಾಯಿತಿಯಿಂದ ಮಕ್ಕಳ ಕಲಿಕೆಗೆ ಗುಣಮಟ್ಟದ ವಾತಾವರಣ ನೀಡಿ ಪೂರಕ ಬೆಳವಣಿಗೆಗೆ ಸಹಕಾರಿಸಲಿದೆ ಎಂದರು.
ಕರೀಕಟ್ಟಿ ಪಿಎಚ್ಸಿ ವೈದ್ಯೆ ಅರುಣಾ ಮ್ಯಾಗೇರಿ, ಎಸ್ಡಿಎಂಸಿ ಉಪಾಧ್ಯಕ್ಷ ಪರಮೇಶ್ವರ ಗಡೆಪ್ಪನವರ, ಪ್ರಭಾರಿ ಮುಖ್ಯ ಶಿಕ್ಷಕ ಎಸ್.ಬಿ. ನದಾಫ್. ಎಸ್.ಸಿ. ವೆಂಕಲಕುಂಟೆ, ಉದಯ ಸಿಂಗಾರಗೊಪ್ಪ, ಆರ್.ಆರ್. ಶಹಪೂರಕರ, ಕುಶಾಲ್ ಮುದ್ದಾಪುರ ಹಾಗೂ ಪ್ರಮುಖರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.