ಪಾಶ್ಚಾಪುರ (ಬೆಳಗಾವಿ ಜಿಲ್ಲೆ): ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಪಾಶ್ಚಾಪುರ ಗ್ರಾಮದಲ್ಲಿ ಮಂಗಳವಾರ ಮೊಹರಂ ಹಬ್ಬದ ಮೆರವಣಿಗೆ ವೇಳೆ ಭಕ್ತರು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆದು, ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಮುಸ್ಲಿಂ ಭಕ್ತರು ಐದು ಡೋಲಿಗಳನ್ನು ಹೊತ್ತು ಸಾಗಿದ್ದರು. ಇಕ್ಕಟ್ಟಾದ ರಸ್ತೆಗಳಲ್ಲಿ ಅಪಾರ ಸಂಖ್ಯೆಯ ಜನ ಸೇರಿದ್ದರಿಂದ ನೂಕು ನುಗ್ಗಲು ಉಂಟಾಯಿತು. ಐದೂ ಡೋಲಿಗಳು ಒಂದೇ ಕಡೆ ಸೇರಿದ್ದರಿಂದ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಗುಂಪಾಗಿ ಸೇರಿದ ಯುವಜನರು ಬೇಗ ಮುಂದೆ ಸಾಗಲಿಲ್ಲ. ಈ ವೇಳೆ ಪೊಲೀಸರು ಜನರನ್ನು ಮುಂದಕ್ಕೆ ತಳ್ಳತೊಡಗಿದರು. ಆಗ ಯುವಕರ ಗುಂಪು ಪೊಲೀಸರನ್ನೇ ಹಿಂದಕ್ಕೆ ತಳ್ಳಿತು. ಕೋಪಗೊಂಡ ಪೊಲೀಸರು ಲಾಠಿಚಾರ್ಜ್ ಮಾಡಿ ಯುವಕರನ್ನು ಓಡಿಸಿದರು ಎಂದು ಮೂಲಗಳು ತಿಳಿಸಿವೆ.
‘ಕರ್ತವ್ಯದಲ್ಲಿ ನಿರತ ಕಾನ್ಸ್ಟೆಬಲ್ ಮೇಲೆ ಯುವಕರು ದಾಳಿ ಮಾಡಿದ್ದಾರೆ. ಅವರನ್ನು ಓಡಿಸಲು ಕಾನ್ಸ್ಟೆಬಲ್ ಎರಡೇಟು ಹೊಡೆದಿದ್ದಾರೆ. ಇದು ಲಾಠಿ ಚಾರ್ಜ್ ಅಲ್ಲ’ ಎಂದು ಹುಕ್ಕೇರಿ ಇನ್ಸ್ಪೆಕ್ಟರ್ ರಮೇಶ ಛಾಯಾಗೋಳ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ನಂತರ ಹಬ್ಬ ಸಾಂಗವಾಗಿ ನೆರವೇರಿದೆ. ಹೆಚ್ಚಿನ ಭದ್ರತೆಗಾಗಿ ಗ್ರಾಮದಲ್ಲಿ ಎರಡು ಡಿ.ಆರ್. ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.