ADVERTISEMENT

ಬೆಳಗಾವಿ: ಅಭ್ಯರ್ಥಿಗಳೇ ಇಲ್ಲದೇ ಕಾಂಗ್ರೆಸ್‌ ಪ್ರಚಾರ!

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2024, 13:44 IST
Last Updated 28 ಏಪ್ರಿಲ್ 2024, 13:44 IST

ಬೆಳಗಾವಿ: ಜಿಲ್ಲೆಯ ಯರಗಟ್ಟಿ ಹಾಗೂ ಉಗಾರ ಖುರ್ದದಲ್ಲಿ ಭಾನುವಾರ ನಡೆದ ‘ಕಾಂಗ್ರೆಸ್‌ ಪ್ರಜಾಧ್ವನಿ–2’ ಪ್ರಚಾರ ಕಾರ್ಯಕ್ರಮದಲ್ಲಿ ಅಭ್ಯರ್ಥಿಗಳೇ ಕಾಣಿಸಲಿಲ್ಲ. ಅವರ ಭಾವಚಿತ್ರ, ಬ್ಯಾನರ್‌, ಕಟೌಟ್‌ ಯಾವುದೂ ಇರಲಿಲ್ಲ. ಕನಿಷ್ಠ ಪಕ್ಷ ಭಾಷಣದಲ್ಲಿ ಕೂಡ ಯಾವ ನಾಯಕರೂ ಅಭ್ಯರ್ಥಿಗಳ ಹೆಸರನ್ನು ನೇರವಾಗಿ ಹೇಳಲಿಲ್ಲ!

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವರು, ಶಾಸಕರು ವೇದಿಕೆಯಲ್ಲಿ ಮಾತನಾಡಿದರು. ಬೆಳಗಾವಿ ಕ್ಷೇತ್ರದ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ, ಚಿಕ್ಕೋಡಿ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಹತ್ತಿರವೂ ಸುಳಿಯಲಿಲ್ಲ. ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರ ಪುತ್ರ, ಸಚಿವ ಸತೀಶ ಜಾರಕಿಹೊಳಿ ಅವರ ಪುತ್ರಿಗೆ ಮತ ಹಾಕಿ ಎಂದಷ್ಟೇ ಮುಖಂಡರು ಪ್ರಚಾರ ಮಾಡಿದರು.

‘ಅಭ್ಯರ್ಥಿಗಳು ಭಾಗಿಯಾದರೆ ಅಥವಾ ಅವರ ಹೆಸರು ಹೇಳಿದರೆ ಸಮಾವೇಶದ ವೆಚ್ಚವು ಆಯಾ ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಸೇರುತ್ತದೆ. ಪಕ್ಷದ ಖಾತೆಯಲ್ಲಿ ವೆಚ್ಚ ಪರಿಗಣನೆ ಆಗಬೇಕು ಎಂಬ ಕಾರಣಕ್ಕೆ ಅಭ್ಯರ್ಥಿಗಳನ್ನು ಮರೆಮಾಚಲಾಗಿದೆ’ ಎಂದು ಕಾಂಗ್ರೆಸ್‌ ಮುಖಂಡರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಅಪಾರ ಸಂಖ್ಯೆಯಲ್ಲಿ ಸೇರಿದ ಜನ ಮಾತ್ರ ಅಭ್ಯರ್ಥಿಗಳು ಏಕೆ ಬಂದಿಲ್ಲ ಎಂದು ಗೊಣಗುತ್ತಲೇ ತೆರಳಿದರು.

ಆದರೆ, ಬೆಳಗಾವಿ ನಗರದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಭಾಗಯಾದ ‘ಬಿಜೆಪಿ ವಿಜಯ ಸಂಕಲ್ಪ ಯಾತ್ರೆ’ಯಲ್ಲಿ ಬೆಳಗಾವಿ ಕ್ಷೇತ್ರದ ಅಭ್ಯರ್ಥಿ ಜಗದೀಶ ಶೆಟ್ಟರ್‌, ಚಿಕ್ಕೋಡಿಯ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.