ಚಿಕ್ಕೋಡಿ: ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಪುರಸಭೆ ಅಧಿಕಾರಿಗಳು ಹಾಗೂ ವಿವಿಧ ಸಮಾಜದ ಮುಖಂಡರು ಸಂವಿಧಾನ ಜಾಗೃತಿ ಜಾಥಾ ಹಾಗೂ ಡಾ.ಅಂಬೇಡ್ಕರ್ ಸ್ಥಬ್ದ ಚಿತ್ರವನ್ನು ಶನಿವಾರ ವಿವಿಧ ವಾದ್ಯ ಮೇಳದೊಂದಿಗೆ ಸ್ವಾಗತಿಸಿದರು.
ಭಾನುವಾರ ಬೆಳಿಗ್ಗೆ ಮೆರವಣಿಗೆ ಪಟ್ಟಣದ ಮಾತಂಗಿಕೇರಿ ಗಲ್ಲಿ, ಪುರಸಭೆ ಕಚೇರಿ, ಕೇಂದ್ರ ಬಸ್ ನಿಲ್ದಾಣ, ಬಸವ ವೃತ್ತವನ್ನು ಬಳಸಿಕೊಂಡು ಸರ್ಕಾರಿ ಮಾದರಿ ಕನ್ನಡ ಶಾಲೆ ತಲುಪಿತು.
ಜಾಥಾದಲ್ಲಿ ಭಾಗವಹಿಸಿದ್ದ ಶಾಸಕ ಗಣೇಶ ಹುಕ್ಕೇರಿ ಮಾತನಾಡಿ, ‘ಸಂವಿಧಾನವು ಸಮಾನತೆ ಭ್ರಾತೃತ್ವ, ರಾಷ್ಟ್ರೀಯ ಏಕತೆ ತರುವಲ್ಲಿ ತನ್ನದೇ ಆದ ಪಾತ್ರವಹಿಸಿದೆ. ಸಂವಿಧಾನದ ಮಹತ್ವವನ್ನು ಮನೆ ಮನೆಗೆ ತಲುಪಿಸುವ ಪ್ರಯತ್ನವನ್ನು ರಾಜ್ಯ ಸರ್ಕಾರ ಜಾಗೃತಿ ಜಾಥಾ ಮೂಲಕ ಮಾಡುತ್ತಿದೆ’ ಎಂದು ಹೇಳಿದರು.
ತಹಶೀಲ್ದಾರ್ ಚಿದಂಬರ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎ. ಮೇಕನಮರಡಿ ಸಂವಿಧಾನ ಪೀಠಿಕೆ ಓದಿ, ಪ್ರತಿಜ್ಞಾ ವಿಧಿ ಬೋಧಿಸಿದರು.
ಪುರಸಭೆ ಸದಸ್ಯರಾದ ಶ್ಯಾಮ ರೇವಡೆ, ಪ್ರವೀಣ ಕಾಂಬಳೆ, ಸಂಜಯ ಕವಟಗಿಮಠ, ತಾನಾಜಿ ಕದಂ, ಸಂತೋಷ ಜೋಗಳೆ, ಸಿಡಿಪಿಒ ಭಾರತಿ ಕಾಂಬಳೆ, ಬಿಸಿಎಂ ಇಲಾಖಾಧಿಕಾರಿ ವೀಣಾ ಮನಗೂಳಿ, ಮುಖಂಡರಾದ ಅಶೋಕ ಭಂಡಾರಕರ, ಸುದರ್ಶನ ತಮ್ಮಣ್ಣವರ ವಿವಿಧ ಇಲಾಖೆಗಳ ಅಧಿಕಾರಿಗಳು, ವಿದ್ಯಾರ್ಥಿಗಳು ಇದ್ದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಪ್ರವೀಣ ಪಾಟೀಲ ಸ್ವಾಗತಿಸಿ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ನಿಡವಣಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.