ADVERTISEMENT

ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿ ಮಹಾರಾಷ್ಟ್ರದಲ್ಲಿತ್ತು: ಹೆಬ್ಬಾಳಕರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2024, 20:22 IST
Last Updated 8 ಜನವರಿ 2024, 20:22 IST
<div class="paragraphs"><p>ಲಕ್ಷ್ಮೀ ಹೆಬ್ಬಾಳಕರ</p></div>

ಲಕ್ಷ್ಮೀ ಹೆಬ್ಬಾಳಕರ

   

ಬೆಳಗಾವಿ: ‘ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ದಾಗಲೂ ನಾವೆಲ್ಲ ಅನ್ಯೋನ್ಯತೆಯಿಂದ ಇದ್ದೆವು. ಕರ್ನಾಟಕ ಏಕೀಕರಣದ ಬಳಿಕವೂ ಅನ್ಯೋನ್ಯತೆ ಮುಂದುವರಿದಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಹೇಳಿಕೆ ಕನ್ನಡಿಗರಲ್ಲಿ ಅಸಮಾಧಾನ ಮೂಡಿಸಿದೆ.

ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನ ಕಾರದಗಾ ಗ್ರಾಮದಲ್ಲಿ ಭಾನುವಾರ, ಕನ್ನಡ ಬಳಗ ಆಯೋಜಿಸಿದ್ದ ಸಾಹಿತ್ಯ ಸಮ್ಮೇಳನದಲ್ಲಿ ಉದ್ಘಾಟನಾ ಭಾಷಣ ಮಾಡಿದ ಅವರು, ‘ಮುಂಬೈ ಪ್ರಾಂತ್ಯ ಎಂದು ಹೇಳುವ ಬದಲು ಮಹಾರಾಷ್ಟ್ರ’ ಎಂದು ಹೇಳಿ ವಿವಾದಕ್ಕೆ ಎಡೆ ಮಾಡಿಕೊಟ್ಟರು.

ADVERTISEMENT

‘ಭಾರತಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿ ಬಂದಿವೆ. ಅದರಲ್ಲಿ ಎಂಟೂ ಕನ್ನಡಕ್ಕೆ ಬಂದಿದ್ದು ಹೆಮ್ಮೆ ತಂದಿದೆ’ ಎಂದು ಸಚಿವೆ ತಪ್ಪಾಗಿ ಹೇಳಿದ್ದು ಕೂಡ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿದೆ.

ಸಚಿವರ ಭಾಷಣದ ವಿಡಿಯೊ ತುಣುಕುಗಳು ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು.

ಈ ಬಗ್ಗೆ ಸ್ಪಷ್ಟನೆ ನೀಡಿದ ಲಕ್ಷ್ಮೀ ಹೆಬ್ಬಾಳಕರ, ‘ನಾನು ಹೆಮ್ಮೆಯ ಕನ್ನಡತಿ. ಕನ್ನಡದ ಬಗ್ಗೆ ವಿಶೇಷ ಅಭಿಮಾನ ಹೊಂದಿದವಳು. ಆದರೆ, ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿ ಮುಂಬೈ ಪ್ರಾಂತ್ಯದಲ್ಲಿತ್ತು. ಆಗಲೂ ನಮ್ಮಲ್ಲಿ ಸಹಬಾಳ್ವೆ ಇತ್ತು, ಈಗಲೂ ಮುಂದುವರಿಯಲಿ ಎಂಬ ಆಶಯ ವ್ಯಕ್ತಪಡಿಸಿದ್ದೇನೆ. ಸ್ವಾತಂತ್ರ್ಯ ಪೂರ್ವದಲ್ಲಿ ಮಹಾರಾಷ್ಟ್ರ ರಾಜ್ಯವೇ ಅಸ್ತಿತ್ವದಲ್ಲಿ ಇರಲಿಲ್ಲ. ಹೀಗಾಗಿ, ನನ್ನ ಹೇಳಿಕೆ ವಿವಾದ ಮಾಡುವ ಪ್ರಶ್ನೆಯೇ ಇಲ್ಲ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.