ಚಿಕ್ಕೋಡಿ: ತಾಲ್ಲೂಕಿನ ಕಲ್ಲೋಳ ಗ್ರಾಮದ ಹೊರ ವಲಯದಲ್ಲಿ ಕೃಷ್ಣಾ ಹಾಗೂ ದೂಧಗಂಗಾ ನದಿ ದಡದ ಗ್ರಾಮಗಳಲ್ಲಿ ಮತ್ತೆ ಮೊಸಳೆ ಉಪಟಳ ಹೆಚ್ಚಾಗಿದೆ. ಪ್ರತಿ ಬಾರಿ ಮುಂಗಾರು ಮಳೆ ಆರಂಭಕ್ಕೆ ಕೃಷ್ಣಾ ನದಿ ನೀರಿನೊಂದಿಗೆ ಹರಿದುಬರುವ ಮೊಸಳೆಗಳು ಗ್ರಾಮಸ್ಥರ ನಿದ್ದೆಗೆಡಿಸಿವೆ.
ಸಂಗಮ ಸ್ಥಳದಿಂದ 500 ಮೀಟರ್ ದೂರದಲ್ಲಿ ಒಂದು ಹೆಣ್ಣು ಹಾಗೂ ಒಂದು ಗಂಡು ಮೊಸಳೆ ಪತ್ತೆಯಾಗಿವೆ. ಅಲ್ಲದೇ ಏಳು ಮೊಸಳೆ ಮರಿಗಳು ಕೂಡ ಪತ್ತೆಯಾಗಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. 5–6 ತಿಂಗಳಿನಿಂದ ಇಲ್ಲಿಯೇ ಬೀಡು ಬಿಟ್ಟ ಅಂದಾಜು 6 ಅಡಿ ಉದ್ದದ ಎರಡು ಮೊಸಳೆಗಳು ಬೀಡು ಬಿಟ್ಟಿದ್ದವು. ಇದೀಗ ಬಾವಿಯ ಬಳಿಯಲ್ಲಿ ಪ್ರತಿ ದಿನ ಮೊಸಳೆ ಮರಿಗಳು ಹೊರ ಬರುತ್ತಿರುವುದರಿಂದ ಸ್ಥಳೀಯರು ಜೀವ ಕೈಯಲ್ಲಿ ಹಿಡಿದು ದಿನ ದೂಡುವಂತಾಗಿದೆ.
ಜೂನ್ 9 ರಂದು ನರಸು ಅವಟೆ ಎಂಬುವವರು ಬಾವಿಯಲ್ಲಿ 5 ಮೊಸಳೆ ಮರಿಗಳು ಪತ್ತೆಯಾಗಿದ್ದು, ಸ್ಥಳೀಯ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ 5 ಮೊಸಳೆ ಮರಿ ಗಳನ್ನು ಹತ್ತಿರದಲ್ಲಿಯೇ ಇರುವ ಕೃಷ್ಣಾ ನದಿಯಲ್ಲಿ ಬಿಟ್ಟು ಬಂದಿದ್ದಾರೆ ಎಂಬ ಆರೋಪವನ್ನು ಸ್ಥಳೀಯರು ಮಾಡುತ್ತಿದ್ದಾರೆ.
ಜೂನ್ 10ರಂದು ಮತ್ತೆ 2 ಮೊಸಳೆ ಮರಿಗಳು ಪತ್ತೆಯಾಗಿದ್ದು, ಅವುಗಳನ್ನು ಸ್ಥಳೀಯರು ಬಕೆಟ್ ವೊಂದರಲ್ಲಿ ಹಿಡಿ ದಿಟ್ಟು ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಹೀಗೆ ದಿನಂಪ್ರತಿ ಮೊಸಳೆ ಮರಿಗಳು ಹೊರ ಬರುತ್ತಿದ್ದರಿಂದ ತೋಟದ ವಸತಿ ಪ್ರದೇಶದಲ್ಲಿ ವಾಸವಾಗಿ ರುವ ನಿವಾಸಿಗಳು ಹೇಗಪ್ಪ ಜೀವನ ಮಾಡುವುದು ಎಂಬ ಚಿಂತೆಗೀಡಾಗಿ ದ್ದಾರೆ. ಹೀಗೆ ಪ್ರತಿ ದಿನವೂ ಮೊಸಳೆ ಮರಿಗಳು ಹೊರ ಬರುತ್ತಿರುವುದಲ್ಲದೇ ಅವಟೆ ಎಂಬುವವರ ತೋಟದಲ್ಲಿ 40-50 ಅಡಿ ಆಳದ ಮೂರು ಬಾವಿಗಳಿದ್ದು ಈ ಬಾವಿಯಲ್ಲಿ ಎರಡು ಮೊಸಳೆಗಳು 5-6 ತಿಂಗಳಿನಿಂದ ನೆಲೆ ನಿಂತಿವೆ ಎನ್ನಲಾಗುತ್ತಿದೆ. ಈ ಕುರಿತು ಅರಣ್ಯ ಇಲಾಖೆಗೆ ಅಧಿಕಾರಿಗಳಿಗೆ ಹಲವು ಭಾರಿ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತೋಟದ ಮಾಲೀಕ ನರಸು ಅವಟೆ ಆರೋಪವಾಗಿದೆ.
ಎರಡು ಮೊಸಳೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹೇಳಿದರೆ, ಬಾವಿಯಲ್ಲಿಯ ನೀರನ್ನು ಖಾಲಿ ಮಾಡಿಸಿ, ಆಗ ಮೊಸಳೆಗಳನ್ನು ಸೆರೆ ಹಿಡಿಯಲು ಅನುಕೂಲವಾಗುತ್ತದೆ ಎಂದು ಅರಣ್ಯ ಇಲಾಖೆಯ ಸಿಬ್ಬಂದಿ ಹೇಳುತ್ತಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಬಾವಿಯಲ್ಲಿಯ ನೀರನ್ನು ಖಾಲಿ ಮಾಡಿದರೂ ಮಳೆಯಿಂದ ಮತ್ತೆಮತ್ತೆ ತುಂಬುತ್ತಲೇ ಇದ್ದರೆ ಬಾವಿಯ ನೀರನ್ನು ಖಾಲಿ ಮಾಡಲು ಹೇಗೆ ಸಾಧ್ಯ? ಮೊಸಳೆಗಳನ್ನು ಸೆರೆ ಹಿಡಿದು ನಮ್ಮ ನಿತ್ಯ ನರಕಯಾತನೆ ಕೊನೆಯಾಗುವುದಾದರೂ ಹೇಗೆ ಎಂದು ತೋಟದ ವಸತಿ ನಿವಾಸಿಗಳ ಅಳಲು.
ಮೊಸಳೆ ಮರಿಗಳು ಪತ್ತೆಯಾಗಿದ್ದ ಜಾಗೆಯಲ್ಲಿಯೇ 3 ಬೃಹತ್ ಬಾವಿಗಳಿದ್ದು, ನೀರಿನಿಂದ ತುಂಬಿವೆ. ಇದರ ಸುತ್ತಲೂ ಹುಲ್ಲು ಇದ್ದು, ದನಗಳಿಗೆ ಹುಲ್ಲು ಕೊಯ್ದು ಹಾಕಲು ರೈತರು ಬರುತ್ತಾರೆ. ದನಗಳನ್ನು ಮೇಯಿಸಲು ಬಿಡುತ್ತಾರೆ. ಮೊಸಳೆಗಳು ದನಕರುಗಳ ಮೇಲೆ ದಾಳಿ ಮಾಡಿದರೆ ಯಾರು ಜವಾಬ್ದಾರಿ ಎಂಬ ಭಯ ಅವಟೆ ತೋಟದ ವಸತಿ ಪ್ರದೇಶದ ಜನರನ್ನು ಕಾಡುತ್ತಿದೆ. ಅಷ್ಟೇ ಅಲ್ಲದೇ, ಕಳೆದ ಮೇ 11 ರಂದು ಸದಲಗಾ ಪಟ್ಟಣದ ಬಳಿಯ ದೂಧಗಂಗಾ ನದಿಯಲ್ಲಿ ಮೊಸಳೆ ದಾಳಿಗೆ ವ್ಯಕ್ತಿಯೋರ್ವ ಬಲಿಯಾಗಿದ್ದು, ಕಲ್ಲೋಳ ಗ್ರಾಮದ ಅವಟೆ ತೋಟದ ವಸತಿ ಪ್ರದೇಶದ ಜನರಲ್ಲಿ ಮತ್ತಷ್ಟು ಭಯಕ್ಕೆ ಕಾರಣವಾಗಿದೆ.
ನಮ್ಮ ತೋಟದಲ್ಲಿ ಕಳೆದ 6 ತಿಂಗಳಿನಿಂದ ಎರಡು ಮೊಸಳೆಗಳಿ ದ್ದವು. ಇದೀಗ ಒಂದು ದಿನ 5, ಮತ್ತೊಂದು ದಿನ 2 ಮರಿಗಳು ಪತ್ತೆಯಾಗಿವೆ..ನರಸು ಅವಟೆ, ಬಾವಿ ಮಾಲೀಕ, ಕಲ್ಲೋಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.