ಬೆಳಗಾವಿ: ‘ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣ ವಿಚಾರದಲ್ಲಿ ಬಿಜೆಪಿಯವರು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಇದರಲ್ಲೂ ರಾಜಕೀಯ ಮಾಡಲು ಮುಂದಾಗಿರುವುದು ನಾಚಿಕೆಗೇಡಿತನದ ಸಂಗತಿ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಲೇವಡಿ ಮಾಡಿದರು.
ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿಯವರು ಜಾಣ ಕುರುಡರು. ಜಾಣ ಕಿವುಡರು ಕೂಡ. ಅವರು ತಮಗೆ ಬೇಕೆಂದಾಗ ಮೊಸಳೆ ಕಣ್ಣೀರು ಸುರಿಸುತ್ತಾರೆ. ಬೇಡವಾದಾಗ ಕಿವುಡರಂತೆ ವರ್ತಿಸುತ್ತಾರೆ. ಈ ಘಟನೆ ವಿರೋಧಿಸಿ ಅವರು ಪ್ರತಿಭಟನೆ ಮಾಡಲು ಮುಂದಾಗಿರುವುದು ಚುನಾವಣೆ ಕಾರಣಕ್ಕಾಗಿ. ಚುನಾವಣೆ ಮುಗಿದ ಮರುಕ್ಷಣವೇ ಅವರಿಗೆ ನೇಹಾ ಯಾರು ಎಂದೇ ಗೊತ್ತಿರುವುದಿಲ್ಲ’ ಎಂದರು.
‘ನೇಹಾ ನಮ್ಮ ಮಗಳು. ಇಂಥ ಘಟನೆ ಆಗಬಾರದಿತ್ತು. ಆದರೆ, ದೇಶದಲ್ಲಿ ಇಂತಹ ಪ್ರಕರಣಗಳು ಸಾಕಷ್ಟು ಆಗಿವೆ. ಈ ಬಗ್ಗೆ ತಮ್ಮ ನಿಲುವೇನು ಎಂಬುದನ್ನು ಬಿಜೆಪಿಯವರು ಸ್ಪಷ್ಟಪಡಿಸಬೇಕು’ ಎಂದು ಪ್ರಶ್ನಿಸಿದ ಹೆಬ್ಬಾಳಕರ, ‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯಾಗಿ ಸರ್ಕಾರದ ಕಡೆಯಿಂದ ಹೋಗಿ, ನೇಹಾ ಹೆತ್ತವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿ ಬಂದಿದ್ದೇನೆ. ಆರೋಪಿಗೆ ಅತ್ಯಂತ ಕಠಿಣ ಶಿಕ್ಷೆ ಕೊಡಿಸುತ್ತೇವೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.