ಕಾಗವಾಡ: ತಾಲ್ಲೂಕಿನ ಐನಾಪೂರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂದಾಜು ₹3 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ರಾಜು ಕಾಗೆ ಭಾನುವಾರ ಭೂಮಿಪೂಜೆ ಸಲ್ಲಿಸಿದರು.
ಐನಾಪೂರ ಪಟ್ಟಣ ಪಂಚಾಯಿತಿ ನಗರೋತ್ಥಾನ ಯೋಜನೆಯಲ್ಲಿ ಮಂಜೂರಾದ ಇಂದಿರಾ ನಗರದಲ್ಲಿ ರಸ್ತೆ ಕಾಮಗಾರಿ, ವಿಶ್ವನಾಥ ದೇವಸ್ಥಾನ ಆವರಣದಲ್ಲಿ ಪ್ಲೇವರ್ ಬ್ಲಾಕ್ ಅಳವಡಿಸುವ ಕಾಮಗಾರಿ, ಎಸ್ಸಿ ಕಾಲೊನಿಯಲ್ಲಿ ಮಂಜೂರಾದ ಹೈಟೆಕ್ ಅಂಗನವಾಡಿ ಕಟ್ಟಡ ಕಾಮಗಾರಿ, ಮುಸ್ಲಿಂ ಸಮಾಜದ ಸ್ಮಶಾನ ಭೂಮಿಗೆ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.
ಪಟ್ಟಣ ಪಂಚಾಯತ ಆವರಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಪಟ್ಟಣದ ಇಬ್ಬರು ಅಂಗವಿಕಲರಿಗೆ ಮಂಜೂರಾದ ತ್ರಿಚಕ್ರ ವಾಹನ ವಿತರಣೆ ಮಾಡಿದರು. ಬಡ ಮಹಿಳೆಯರಿಗೆ ಸರ್ಕಾರದಿಂದ ಮಂಜೂರಾದ 166 ಹೊಲಿಗೆ ಯಂತ್ರಗಳನ್ನು ಹಾಗೂ 7 ಗ್ಯಾಸ್ ಸಿಲಿಂಡರ್ಗಳನ್ನು ವಿತರಣೆ ಮಾಡಿದರು.
ಶಾಸಕ ರಾಜು ಕಾಗೆ ಮಾತನಾಡಿ, ಸರ್ಕಾರದ ಯೋಜನೆಗಳು ನೇರವಾಗಿ ಬಡ ಜನರಿಗೆ ತಲುಪಿಸುವ ಕೆಲಸ ಪ್ರಾಮಾಣಿಕವಾಗಿ ಆಗಬೇಕು. ಅಂದಾಗ ಮಾತ್ರ ಗ್ರಾಮೀಣ ಜನ ಪ್ರಗತಿ ಹೊಂದಲು ಸಾಧ್ಯ. ಐನಾಪೂರ ಪಟ್ಟಣಕ್ಕೆ ಸರ್ಕಾರದಿಂದ ವಿಶೇಷ ಅನುದಾನ ಮಂಜೂರು ಮಾಡಿಸಿ ಎಲ್ಲ ರಸ್ತೆ, ಚರಂಡಿಯನ್ನು ಮುಂದಿನ ದಿನಗಳಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.
ಪ. ಪಂ. ಮುಖ್ಯಾಧಿಕಾರಿ ಮಾಹಾಂತೇಶ ಕವಲಾಪೂರ ಹಾಗೂ ಸದಸ್ಯರು ಶಾಸಕರಿಗೆ ಪೌರ ಸನ್ಮಾನ ಮಾಡಿದರು.
ಪ.ಪಂ ಸದಸ್ಯರಾದ ಪ್ರವೀಣ ಗಾಣಿಗೇರ,ಸಂಜಯ ಕುಚನೂರೆ,ಅರುಣ ಗಾಣಿಗೇರ, ಸಂಜಯ ಬಿರಡಿ, ಮುಖಂಡರಾದ ಸುಭಾಷ ಪಾಟೀಲ, ಚಮ್ಮನರಾವ ಪಾಟೀಲ, ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.