ರಾಮದುರ್ಗ: ತಾಲ್ಲೂಕಿನ ತೋರಣಗಟ್ಟಿಯಲ್ಲಿ ಸುಮಾರು 9 ವರ್ಷಗಳ ಬಳಿಕ ಜರುಗಿದ ಗ್ರಾಮದೇವಿ ಜಾತ್ರೆಯ ಕೊನೆಯ ದಿನವಾದ ಬುಧವಾರ ಉಭಯ ದೇವಿಯರು ಗ್ರಾಮದ ವಿವಿಧ ಓಣಿಗಳಲ್ಲಿ ಹೊನ್ನಾಟದೊಂದಿಗೆ ಭಕ್ತರ ಮನೆಮನೆಗೆ ತೆರಳಿ ಭಕ್ತಿ ಹರಕೆ ಪಡೆಯುವ ಕಾರ್ಯ ನಡೆಯಿತು.
ದುಷ್ಟ ಶಕ್ತಿಗಳ ನಿಗ್ರಹಿಸುವ ಸಂಕೇತವಾಗಿ ಹೊನ್ನಾಟವು ನಡೆಯುತ್ತದೆ. ವಿರಾಟ ರೂಪ ತಾಳಿದ ದೇವಿಯು ರಥಿಕಳಾಗಿ ದುಷ್ಟಶಕ್ತಿಗಳ ನಿಗ್ರಹಿಸಲು ದುರ್ಗಿ ರೂಪಿಣಿಯಾದ ದೇವಿಯನ್ನು ಹೆಗಲ ಮೇಲೆ ಹೊತ್ತ ಭಕ್ತರು ಬಡಾವಣೆಗಳಲ್ಲಿ ಮೆರವಣಿಗೆಯಲ್ಲಿ ಸಾಗುವುದು ವಾಡಿಕೆ. ಉಗ್ರ ರೂಪಿಣಿಯಾಗಿ ದುಷ್ಟ ಅಸುರರ ರುಂಡ ಚೆಂಡಾಡುತ್ತ ದೇವಿ ರಕ್ತದ ಕೋಡಿಯನ್ನೇ ಹರಿಸುತ್ತಾಳೆ. ಈ ರಕ್ತದ ಚಿಮ್ಮುವಿಕೆಯ ಸಂಕೇತವೇ ಕುಂಕುಮ-ಭಂಡಾರದ ಹಾರಿಸುವಿಕೆಯಾಗಿದೆ ಎಂಬುದು ಜನರ ನಂಬಿಕೆ.
ದೇವಿಯರ ಮೆರವಣಿಗೆಯಲ್ಲಿ ಡೊಳ್ಳು, ಹಲಗೆ, ಕಹಳೆ, ಕರಡಿ ಮಜಲು, ಜಾಂಜ್, ವಿವಿಧ ಚರ್ಮ ವಾದ್ಯವಾಲಗಗಳೊಂದಿಗೆ ದೇವಿಯರು ಹೊನ್ನಾಟದ ರೂಪದಲ್ಲಿ ಗ್ರಾಮದ ಪ್ರದಕ್ಷಿಣೆ ಹಾಕಿದರು. ದಾರಿಗುಂಟ ಭಂಡಾರದ ಹುಡಿ ಹುಯಿಲೆದ್ದು ಅಂಬರಕ್ಕೆ ಆವರಿಸಿ ಉರಿಗೆ ಊರೇ ರಂಗೇರಿತ್ತು.
ಎತ್ತ ನೋಡಿದರೂ ಭಂಡಾರದ ಹುಡಿಯಲ್ಲಿ ಹುದುಗಿದ ಜನಸಾಗರವೇ ಮೇರೆಮೀರಿ ಹರಿದು ಬರುವಂತೆ ತೋರಿತು. ಹೊನ್ನಾಟದ ಬಳಿಕ ಸಂಜೆ ದೇವಿಯರು ಸೀಮೆ ಹೋಗುವ ಸಂಪ್ರದಾಯ ಅಂತ್ಯಗೊಂಡ ನಂತರ ಜಾತ್ರೆಗೆ ತೆರೆ ಬಿದ್ದಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.