ಚಿಕ್ಕೋಡಿ: ನೆರೆಯ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಮುಂದುವರೆದಿದ್ದು, ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ ಕೃಷ್ಣಾ, ಧೂದಗಂಗಾ, ವೇದಗಂಗಾ ನದಿಗಳಲ್ಲಿ ನೀರು ಹರಿಯುವಿಕೆ ಪ್ರಮಾಣ ಸೋಮವಾರ ಮತ್ತಷ್ಟು ಏರಿಕೆಯಾಗಿದೆ.
ಮಹಾರಾಷ್ಟ್ರದ ಕೊಯ್ನಾದಲ್ಲಿ 72 ಮಿ.ಮೀ, ವಾರಣಾದಲ್ಲಿ 48 ಮಿ.ಮೀ, ಕಾಳಮ್ಮವಾಡಿಯಲ್ಲಿ 60 ಮಿ.ಮೀ, ಮಹಾಬಳೇಶ್ವರದಲ್ಲಿ 155 ಮಿ.ಮೀ, ನವಜಾದಲ್ಲಿ 97 ಮಿ.ಮೀ, ರಾಧಾನಗರಿಯಲ್ಲಿ 55 ಮಿ.ಮೀಯಷ್ಟು ಮಳೆ ಬೀಳುತ್ತಿದೆ.
ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕೃಷ್ಣಾ ನದಿಗೆ ಅಡ್ಡಲಾಗಿರುವ ರಾಜಾಪೂರೆ ಬ್ಯಾರೇಜ್ನಲ್ಲಿ 13,550 ಕ್ಯುಸೆಕ್ ಹೊರ ಹರಿವು ಇದ್ದು, ದೂಧಗಂಗಾ ನದಿಯಿಂದ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಗ್ರಾಮದ ಬಳಿಯಲ್ಲಿ 4,570 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಕೃಷ್ಣಾ ಹಾಗೂ ದೂಧಗಂಗಾ ನದಿಯ ಸಂಗಮ ಸ್ಥಳವಾಗಿರುವ ಕಲ್ಲೋಳ ಬ್ಯಾರೇಜ್ ಬಳಿಯಲ್ಲಿ 18,120 ಕ್ಯುಸೆಕ್ ನೀರು ಹರಿಯುತ್ತಿದೆ.
ಕೃಷ್ಣಾ ನದಿಗೆ ಅಡ್ಡಲಾಗಿರುವ 6 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಹಿಪ್ಪರಗಿ ಬ್ಯಾರೇಜ್ನಲ್ಲಿ 4 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಮಹಾರಾಷ್ಟ್ರದ ಕೊಯ್ನಾ, ಧೂಮ, ಕಣೇರ, ವಾರಣಾ, ಕಾಳಮ್ಮವಾಡಿ, ರಾಧಾನಗರಿ ಡ್ಯಾಂಗಳಲ್ಲೂ ನೀರು ಸಂಗ್ರಹ ಪ್ರಮಾಣ ಕಳೆದ 2-3 ದಿನಗಳಲ್ಲಿ ಮತ್ತಷ್ಟು ಹೆಚ್ಚಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.