ADVERTISEMENT

ಅಂಜಲಿ ಕುಟುಂಬಕ್ಕೆ ಜೋಳಿಗೆ ಹಣ: ಚಂದ್ರಶೇಖರ್ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 19 ಮೇ 2024, 15:41 IST
Last Updated 19 ಮೇ 2024, 15:41 IST
ಹುಕ್ಕೇರಿ ಹಿರೇಮಠದಲ್ಲಿ ಭಾನುವಾರ ವಟುಗಳಿಗೆ ಮಠಾಧ್ಯಕ್ಷ ಚಂದ್ರಶೇಖರ ಸ್ವಾಮೀಜಿ ಲಿಂಗದೀಕ್ಷೆ ನೀಡಿದರು
ಹುಕ್ಕೇರಿ ಹಿರೇಮಠದಲ್ಲಿ ಭಾನುವಾರ ವಟುಗಳಿಗೆ ಮಠಾಧ್ಯಕ್ಷ ಚಂದ್ರಶೇಖರ ಸ್ವಾಮೀಜಿ ಲಿಂಗದೀಕ್ಷೆ ನೀಡಿದರು   

ಹುಕ್ಕೇರಿ (ಬೆಳಗಾವಿ ಜಿಲ್ಲೆ):  ಹುಬ್ಬಳ್ಳಿಯಲ್ಲಿ ಹತ್ಯೆಯಾದ ಅಂಜಲಿ ಅಂಬಿಗೇರ ಕುಟುಂಬಕ್ಕೆ ಹುಕ್ಕೇರಿ ಹಿರೇಮಠದಲ್ಲಿ ನಡೆದ ಲಿಂಗದೀಕ್ಷೆ (ಶಿವದೀಕ್ಷಾ) ಪಡೆದ ವಟುಗಳು ಭೀಕ್ಷಾಟನೆ ಮೂಲಕ ಜೋಳಿಗೆಯಲ್ಲಿ ತಂದ ₹ 50 ಸಾವಿರ ನೀಡುವುದಾಗಿ ಸ್ಥಳೀಯ ಹಿರೇಮಠದ ಚಂದ್ರಶೇಖರ್ ಸ್ವಾಮೀಜಿ ಹೇಳಿದರು.

ಹಿರೇಮಠದ ಗುರುಶಾಂತೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಜಂಗಮದೀಕ್ಷೆ ಕಾರ್ಯಕ್ರಮದಲ್ಲಿ ಜಂಗಮರ ಜೋಳಿಗೆಯಲ್ಲಿ ಬಂದ ಹಣವನ್ನು ಮಠಕ್ಕಾಗಿ ಬಳಸುತ್ತೇವೆ. ಆದರೆ ಕುಟುಂಬ ಸಾಗಿಸುತ್ತಿದ್ದ ಅಂಜಲಿ ಅಂಬಿಗೇರ ಅವರ ಹತ್ಯೆಯಿಂದ ಕುಟುಂಬ ಸಂಕಷ್ಟಕ್ಕೀಡಾಗಿದೆ. ಈ ಹಣವನ್ನು ಸಹಾಯಾರ್ಥವಾಗಿ ನೀಡಲು ನಿರ್ಧರಿಸಿದ್ದೇವೆ’ ಎಂದರು.

ವೀರಶೈವ ಧರ್ಮದ ಮಠಗಳು ಕೇವಲ ಪೂಜೆ ಪುನಸ್ಕಾರ ಮಾಡಲು ಸೀಮಿತವಾಗದೆ, ಕಷ್ಟದಲ್ಲಿ ನೊಂದ ಕುಟುಂಬಕ್ಕೆ ನೆರವಾಗುವ ಕಾರ್ಯ ಕೂಡಾ ಮಾಡುತ್ತಿವೆ. ಭಾನುವಾರ ಹುಕ್ಕೇರಿ ಹಿರೇಮಠದಲ್ಲಿ ನೂರಾರು ವಟುಗಳಿಗೆ ನಡೆದ ಲಿಂಗದೀಕ್ಷೆಯಲ್ಲಿ ವಟುಗಳ ಜೋಳಿಗೆಯಲ್ಲಿ ಬಂದ ಹಣ ಗುರುವಿಗೆ ಕಾಣಿಕೆಯಾಗಿ ಸಲ್ಲಬೇಕು. ಆದರೆ ಆ ಹಣವನ್ನು ನೆರವಿನ ಕೆಲಸಕ್ಕೆ ಬಳಸಿದ್ದು ಸಾರ್ಥಕ’ ಎಂದು ಹೇಳಿದರು.

ADVERTISEMENT

ಸರ್ಕಾರ ಕೂಡಲೇ ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ಕೊಲೆ ಆರೋಪಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

 ಮಠದಿಂದ ಆರಂಭಗೊಂಡ ರಥೋತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ರಥಕ್ಕೆ ಭಕ್ತರು ತುಂಬಿದ ಕೊಡದ ನೀರು ಹಾಕಿ ಪೂಜೆ ಸಲ್ಲಿಸಿದರು.

ವಿರಕ್ತಮಠದ ಶಿವಬಸವ ಸ್ವಾಮೀಜಿ, ಮಲ್ಲಯ್ಯ ಮಠಪತಿ, ಸಂಸ್ಕೃತ ಪಾಠಶಾಲೆಯ ಸಂಪತ್ ಕುಮಾರ ಶಾಸ್ತ್ರಿ, ಚಂದ್ರಶೇಖರ್ ಶಾಸ್ತ್ರಿ, ಮಹಾಂತೇಶ ಹಿರೇಮಠ, ಈರಣ್ಣ ಗಣಾಚಾರಿ, ಮುಖ್ಯಾಧ್ಯಾಪಕ ಶಿವಾನಂದ ಜಿನರಾಳಿ, ಮುಖಂಡರಾದ ಆನಂದ ಪಟ್ಟಣಶೆಟ್ಟಿ  ಸೇರಿದಂತೆ ನೂರಾರು ಭಕ್ತರು ಇದ್ದರು.

ಹುಕ್ಕೇರಿ ಹಿರೇಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಪ್ರಮುಖ ಬೀದಿಗಳಲ್ಲಿ ರಥೋತ್ಸವ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.