ADVERTISEMENT

ಜಗತ್ತಿಗೆ ಅರ್ಥವಾದ ಯೋಗದ ಮಹತ್ವ: ಹಲಗೇಕರ

​ಪ್ರಜಾವಾಣಿ ವಾರ್ತೆ
Published 21 ಜೂನ್ 2024, 16:19 IST
Last Updated 21 ಜೂನ್ 2024, 16:19 IST
ಖಾನಾಪುರ ತಾಲ್ಲೂಕಿನ ತೋಪಿನಕಟ್ಟಿ ಗ್ರಾಮದ ಸಿದ್ದಾಶ್ರಮ ಮಠದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಶಾಸಕ ವಿಠ್ಠಲ ಹಲಗೇಕರ, ರಾಮದಾಸ ಮಹಾರಾಜರು, ತಾಪಂ ಇಒ ವೀರನಗೌಡ ಹಾಗೂ ಇತರರು ಯೋಗಾಭ್ಯಾಸ ಮಾಡಿದರು
ಖಾನಾಪುರ ತಾಲ್ಲೂಕಿನ ತೋಪಿನಕಟ್ಟಿ ಗ್ರಾಮದ ಸಿದ್ದಾಶ್ರಮ ಮಠದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಶಾಸಕ ವಿಠ್ಠಲ ಹಲಗೇಕರ, ರಾಮದಾಸ ಮಹಾರಾಜರು, ತಾಪಂ ಇಒ ವೀರನಗೌಡ ಹಾಗೂ ಇತರರು ಯೋಗಾಭ್ಯಾಸ ಮಾಡಿದರು    

ಖಾನಾಪುರ: ‘ಯೋಗದ ಮಹತ್ವ ಇಂದು ಇಡೀ ಜಗತ್ತಿಗೆ ಅರ್ಥವಾಗಿದೆ. ಜಗತ್ತಿನಾದ್ಯಂತ ಯೋಗ ಮಾಡುವವರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಯೋಗದತ್ತ ಜನರು ಆಕರ್ಷಿತರಾಗುತ್ತಿದ್ದಾರೆ. ಇದರೊಂದಿಗೆ ಯೋಗ ದಿನ ವಿಶ್ವದಾದ್ಯಂತ ಹೊಸ ದಾಖಲೆ ಸೃಷ್ಟಿಸಿದೆ’ ಎಂದು ಶಾಸಕ ವಿಠ್ಠಲ ಹಲಗೇಕರ ಹೇಳಿದರು.

ತಾಲ್ಲೂಕಿನ ತೋಪಿನಕಟ್ಟಿ ಗ್ರಾಮದ ಅಮೃತ ಸರೋವರದ ಆವರಣದಲ್ಲಿ ಶುಕ್ರವಾರ ಖಾನಾಪುರ ತಾಲ್ಲೂಕು ಪಂಚಾಯ್ತಿ ಹಾಗೂ ತೋಪಿನಕಟ್ಟಿ ಗ್ರಾಮ ಪಂಚಾಯ್ತಿ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ದಿನನಿತ್ಯದ ಒತ್ತಡದ ಜೀವನದ ನಡುವೆ ನಿಯಮಿತ ಯೋಗಾಭ್ಯಾಸ ಅನುಸರಿಸುವುದರಿಂದ ಮಾನಸಿಕ ಮತ್ತು ದೈಹಿಕ ಸದೃಢತೆಯನ್ನು ಹೊಂದಬಹುದು. ದೇಹದ ಶುದ್ಧೀಕರಣ ಹಾಗೂ ಸದೃಢತೆಗೆ ಯೋಗಾಭ್ಯಾಸ ರಾಮಬಾಣ’ ಎಂದು ಅವರು ವಿವರಿಸಿದರು.

ADVERTISEMENT

ಕಾರ್ಯಕ್ರಮದ ನೆನಪಿಗಾಗಿ ಶಾಸಕ ಹಲಗೇಕರ ದಂಪತಿ ತೋಪಿನಕಟ್ಟಿಯ ಅಮೃತ ಸರೋವರದ ಆವರಣದಲ್ಲಿ ಸಸಿ ನೆಟ್ಟು ನೀರುಣಿಸಿದರು.

ತಾ.ಪಂ. ಇಒ ವೀರನಗೌಡ ಏಗನಗೌಡರ ನೇತೃತ್ವದಲ್ಲಿ ತೋಪಿನಕಟ್ಟಿ ಗ್ರಾಮದ ಸಿದ್ದಾಶ್ರಮ ಮಠದ ಸಭಾಂಗಣದಲ್ಲಿ ಸಾಮೂಹಿಕ ಯೋಗ ಪ್ರದರ್ಶನ ಜರುಗಿತು. ನರೇಗಾ ಕೂಲಿಕಾರರು, ಗ್ರಾಪಂ ಸದಸ್ಯರು, ಸಿಬ್ಬಂದಿ, ಗ್ರಾಮಸ್ಥರು, ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿ ಸಾಮೂಹಿಕ ಯೋಗ ಪ್ರದರ್ಶಿಸಿದರು.

ಗ್ರಾಮದ ಸಿದ್ಧಾಶ್ರಮ ಮಠದ ರಾಮದಾಸ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಪಿಡಿಒ ರಾಜಾರಾಮ ಹಲಗೇಕರ ಸ್ವಾಗತಿಸಿದರು. ಕಾರ್ಯದರ್ಶಿ ರಘುನಾಥ ದೇಸಾಯಿ ಕಾರ್ಯಕ್ರಮ ನಿರ್ವಹಿಸಿದರು. ಐಇಸಿ ಸಂಯೋಜಕ ಮಹಾಂತೇಶ ಜಾಂಗಟಿ ವಂದಿಸಿದರು.

ಅಮೃತ ಸರೋವರಗಳ ಆವರಣ: ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ನಿರ್ಮಾಣವಾಗುತ್ತಿರುವ ಅಮೃತ ಸರೋವರಗಳ ಆವರಣದಲ್ಲಿ ಶುಕ್ರವಾರ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. ಸಾಮೂಹಿಕ ಯೋಗ ಪ್ರದರ್ಶನ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.