ಅಥಣಿ: ಅಥಣಿಗೆ ಜಿಲ್ಲಾ ನ್ಯಾಯಾಲಯ ಮಂಜೂರಾಗಿದ್ದು, 11 ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಬೆಳಗಾವಿ ಅಥಣಿ ಇದರ ಉದ್ಘಾಟನಾ ಸಮಾರಂಭವನ್ನು ಜುಲೈ 6 ರಂದು ಅಥಣಿ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ ಬೆಳಿಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಅಥಣಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎ.ಎಸ್.ಹುಚಗೌಡರ ತಿಳಿಸಿದರು.
ಅಥಣಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಹೈಕೋರ್ಟ್ ನ್ಯಾಯಾಲಯದ ಮತ್ತು ಬೆಳಗಾವಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಕೆ.ಎಸ್.ಮುದಗಲ್ ಉದ್ಘಾಟಿಸುವರು. ಹೈಕೋರ್ಟ್ ನ್ಯಾಯಮೂರ್ತಿಗಳಾದ ಸಚೀನ ಮಗದುಮ, ಕೆ.ಎಸ್.ಹೇಮಲೇಖಾ, ರಾಮಚಂದ್ರ ಹುದ್ದಾರ, ವಿಜಯಕುಮಾರ ಪಾಟೀಲ ಭಾಗವಹಿಸುವರು ಎಂದರು.
ಸಚಿವ ಎಚ್.ಕೆ.ಪಾಟೀಲ ಅಧ್ಯಕ್ಷತೆ ವಹಿಸುವರು. ಸಚಿವ ಸತೀಶ ಜಾರಕಿಹೊಳಿ, ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಶಾಸಕರಾದ ಲಕ್ಷ್ಮಣ ಸವದಿ, ರಾಜು ಕಾಗೆ ಆಗಮಿಸುವರು. ಜಿಲ್ಲಾ ನ್ಯಾಯಾಧೀಶರಾದ ಜಿಲ್ಲಾ ಸೇಷನ್ಸ್ ನ್ಯಾಯಾಧೀಶ ತ್ಯಾಗರಾಜ ಇನವಳ್ಳಿ ಭಾಗವಹಿಸುವರು ಎಂದರು.
ಹಿರಿಯ ನ್ಯಾಯವಾದಿ ಕೆ.ಎ.ವಣಜೋಳ ಮಾತನಾಡಿ, ಅನೇಕ ವರ್ಷಗಳ ಹೋರಾಟದ ಫಲವಾಗಿ ಅಥಣಿಯಲ್ಲಿ ಜಿಲ್ಲಾ ಹೆಚ್ಚುವರಿ ನ್ಯಾಯಾಲಯ ಸ್ಥಾಪನೆಯಾಗುತ್ತಿರುವುದು ನಮ್ಮೆಲ್ಲರಿಗೆ ಸಂತಸ ತಂದಿದೆ ಎಂದರು.
ವಕೀಲರ ಸಂಘದ ಕಾರ್ಯದರ್ಶಿ ಮಿತೇಶ ಪಟ್ಟಣ, ಬಿ ಬಿ ಬಿಸಲಾಪೂರ, ಎಂ.ಸಿ.ದುಂಡಿ, ಎಸ್.ಎ. ಸಂಕ, ಎಸ್. ಬಿ ಪತ್ತಾರ, ಎನ್. ಬಿ. ಕನಾಳೆ, ಪಿ. ಪಿ. ಮೋರೆ, ಎ. ಎನ್.ಕೋಟುರಮಠ, ಆರ್. ಎನ್. ಕುಲ್ಲೋಳಿ, ಆರ್. ಪಾಟೀಲ, ಪಿ. ಎಂ. ಕಾಂಬಳೆ ಸೇರಿದಂತೆ ಇನ್ನಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.