ಚನ್ನಮ್ಮನ ಕಿತ್ತೂರು: ‘ಎಲ್ಲ ರಂಗಗಳಲ್ಲೂ ಪುರುಷರಿಗೆ ಸಮಾನವಾಗಿ ಕೆಲಸ ನಿರ್ವಹಿಸುತ್ತಿರುವ ಮಹಿಳೆಯರಿಗೆ ರಾಜಕೀಯ ಕ್ಷೇತ್ರದಲ್ಲೂ ಹೆಚ್ಚಿನ ಪ್ರಾತಿನಿಧ್ಯ ಸಿಗಬೇಕಿದೆ’ ಎಂದು ಜಾನಪದ ಸಂಶೋಧನೆ ಕೇಂದ್ರದ ಅಧ್ಯಕ್ಷೆ ಹಾಗೂ ಹಿರಿಯ ರಂಗ ನಿರ್ದೇಶಕಿ ವಿಶ್ವೇಶ್ವರಿ ಹಿರೇಮಠ ಹೇಳಿದರು.
ಇಲ್ಲಿಯ ಕಲ್ಮಠದ ಶಂಕರ ಚಂದರಗಿ ಸಭಾಭವನದಲ್ಲಿ ಶನಿವಾರ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಲೋಕಸಭೆ, ವಿಧಾನಸಭೆಗಳಲ್ಲಿ ಮಹಿಳೆಯರ ಸಂಖ್ಯೆ ಬೆರಳೆಣಿಕೆಯಷ್ಟಿದೆ. ರಾಜಕೀಯ ಪಕ್ಷಗಳೂ ಅವರಿಗೆ ಹೆಚ್ಚಿನ ಅವಕಾಶ ನೀಡಬೇಕು. ಪ್ರತಿ ಕ್ಷೇತ್ರದಲ್ಲಿಯೂ ಮಹಿಳೆ ಅಬಲೆಯಲ್ಲ ಸಬಲೆ ಎಂದು ಈಗಾಗಲೇ ಸಾಬೀತು ಮಾಡಿಯಾಗಿದೆ’ ಎಂದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಬಿ. ದಳವಾಯಿ, ವೈದ್ಯ ಭಾರತಿ ತೇಲಿ, ಪತ್ರಕರ್ತ ಉಳವಯ್ಯ ಹಿರೇಮಠ ಮಾತನಾಡಿದರು. ರಾಜಗುರು ಸಂಸ್ಥಾನ ಕಲ್ಮಠದ ಪೀಠಾಧ್ಯಕ್ಷ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಮರಣಾನಂತರ ದೇಹದಾನ ಮಾಡಿದ ಗಂಗಮ್ಮ ಪೂಜೇರ ಮತ್ತು ಸಾಧಕಿ ಶಿವಮ್ಮ ಆನಿಗೋಳ ಅವರನ್ನು ಇದೇ ವೇಳೆ ಸತ್ಕರಿಸಲಾಯಿತು.
ನಂದಾ ಕಾಜಗಾರ, ಜಯಶ್ರೀ ಹಿರೇಮಠ, ಸ್ನೇಹಾ ದೇವರಮನಿ, ಶೋಭಾ ಪಾಶ್ಚಾಪುರ, ಪ್ರಭಾ ಲದ್ದಿಮಠ, ಸೌಮ್ಯ ರಾಘವೇಂದ್ರ, ಸವಿತಾ ಹಿರೇಮಠ, ಪ್ರತಿಭಾ ಉಣಕಲ್ಲಕರ, ಮಹೇಶ್ವರ ಹೊಂಗಲ, ಬಸವರಾಜ ಬಿದರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.