ಚನ್ನಮ್ಮನ ಕಿತ್ತೂರು: ‘ಮಾದಕ ವಸ್ತುಗಳ ಹವ್ಯಾಸವು ಕೌಟುಂಬಿಕ ನೆಮ್ಮದಿಯನ್ನು ಹಾಳು ಮಾಡುತ್ತದೆ. ಸಮಾಜದಲ್ಲಿ ವ್ಯಕ್ತಿತ್ವದ ಘನತೆ ಕುಗ್ಗಲು ಕಾರಣವಾಗುತ್ತದೆ’ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಅಭಿಪ್ರಾಯಪಟ್ಟರು.
ಇಲ್ಲಿಯ ವೀರಭದ್ರೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ ಜನಜಾಗೃತಿ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ರಾಜಣ್ಣ ಕೊರವಿ, ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ತಾಲ್ಲೂಕು ವೈದ್ಯಾಧಿಕಾರಿ ಎಸ್.ಎಸ್. ಸಿದ್ದಣ್ಣವರ, ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ, ಡಾ. ಜಗದೀಶ ಹಾರುಗೊಪ್ಪ, ಬಸವರಾಜ ಸೊಪ್ಪಿಮಠ, ವಿಠ್ಠಲ ಪಿಶೆ ಮಾತನಾಡಿದರು.
ಸತೀಶ ನಾಯ್ಕ, ಸಂದೀಪ ನಾಯ್ಕ, ರಾಧಾ ಕಾದ್ರೊಳ್ಳಿ, ಕೃಷ್ಣಾಜಿ ಕುಲಕರ್ಣಿ, ರಾಜು ಮಿರ್ಜನ್ನವರ, ಉಮಾದೇವಿ ಬಿಕ್ಕಣ್ಣವರ, ಲಕ್ಷ್ಮಣ ಕುಂದಗೋಳ, ಸತೀಶ ಬಾಸ್ಕರ ಇದ್ದರು.
ಇದಕ್ಕೂ ಮೊದಲು ನಡೆದ ಜನಜಾಗೃತಿ ಜಾಥಾವನ್ನು ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಉದ್ಘಾಟಿಸಿದರು. ಪಟ್ಟಣದ ಪ್ರಮುಖ ಬೀದಿಯಲ್ಲಿ ಜಾಗೃತಿ ನಾಮಫಲಕ ಹಿಡಿದು ಮಹಿಳೆಯರು ಸಂಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.