ADVERTISEMENT

ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2024, 16:15 IST
Last Updated 30 ಮಾರ್ಚ್ 2024, 16:15 IST

ಖಾನಾಪುರ: ತಾಲ್ಲೂಕಿನ ಗುಂಜಿ ಗ್ರಾಮದ ಬಳಿ ನಿರ್ಮಾಣ ಹಂತದ ಬೆಳಗಾವಿ ಪಣಜಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಗುತ್ತಿಗೆ ಪಡೆದ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ವಾಹನ ಚಾಲಕ, ವಿಜಯಪುರ ಜಿಲ್ಲೆ ತಾಳಿಕೋಟಿ ತಾಲೂಕಿನ ಅಸ್ಕಿ ಗ್ರಾಮದ ಜಟ್ಟೆಪ್ಪ (ರವಿ) ಶರಣಪ್ಪ ಹಿರೇಕುರುಬರ (35) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕು ಗುಂಡಲಗೇರ ನಿವಾಸಿ ಯಲ್ಲಪ್ಪ ಮತ್ತು ಅದೇ ಜಿಲ್ಲೆಯ ತೇವರ ವಡಗೇರ ನಿವಾಸಿ ವಿಜಯಕುಮಾರ ಬಂಧಿತ ಆರೋಪಿಗಳು. 

ಪ್ರಕರಣದ ವಿವರ: ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದ ಸಂಸ್ಥೆಯಲ್ಲಿ ವಾಹನ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ರವಿ ಕಳೆದ ಮಾ.26ರಂದು ರಾತ್ರಿ ಗುಂಜಿ ಗ್ರಾಮದ ಬಳಿ ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಯಲ್ಲಪ್ಪ ಮತ್ತು ವಿಜಯಕುಮಾರ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದಿದ್ದರು. ಮಾತಿಗೆ ಮಾತು ಬೆಳೆದು ರವಿಯ ಮೇಲೆ ಯಲ್ಲಪ್ಪ ಮತ್ತು ವಿಜಯಕುಮಾರ ಇವರಿಬ್ಬರೂ ಸೇರಿ ಮಾರಣಾಂತಿಕ ಹಲ್ಲೆ ನಡೆಸಿದ್ದರು.

ADVERTISEMENT

ಗಂಭೀರವಾಗಿ ಗಾಯಗೊಂಡಿದ್ದ ರವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಮಾ.28ರಂದು ಮೃತಪಟ್ಟಿದ್ದರು. ರವಿ ಸಾವಿಗೆ ಯಲ್ಲಪ್ಪ ಮತ್ತು ವಿಜಯಕುಮಾರ ಕಾರಣ ಎಂದು ರವಿಯ ತಾಯಿ ಖಾನಾಪುರ ಠಾಣೆಗೆ ದೂರು ಸಲ್ಲಿಸಿದ್ದರು.

ದೂರಿನ ತನಿಖೆ ಆರಂಭಿಸಿದ ಖಾನಾಪುರ ಠಾಣೆಯ ಇನ್‌ಸ್ಪೆಕ್ಟರ್‌ ರಾಮಚಂದ್ರ ನಾಯ್ಕ ಪ್ರಕರಣ ದಾಖಲಾದ 48 ಗಂಟೆಯಲ್ಲೇ ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. 

ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೇದ ಮಾರ್ಗದರ್ಶನದಲ್ಲಿ ನಡೆದ ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಖಾನಾಪುರ ಠಾಣೆಯ ನಿರಂಜನಸ್ವಾಮಿ, ಜಗದೀಶ ಕಾದ್ರೊಳ್ಳಿ, ಗುರುರಾಜ ತಮದಡ್ಡಿ, ಈಶ್ವರ ಜಿನ್ನವ್ವಗೋಳ, ಮಂಜುನಾಥ ಮುಸಳಿ ಮತ್ತು ಜಿಲ್ಲಾ ಟೆಕ್ನಿಕಲ್ ಸೆಲ್ ಸಿಬ್ಬಂದಿ ವಿನೋದ ಠಕ್ಕನವರ, ಸಚೀನ ಪಾಟೀಲ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.