ADVERTISEMENT

ಮತ್ತೆ ಬನ್ನಿ ಕಿತ್ತೂರು ಉತ್ಸವಕ್ಕೆ...

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 20:37 IST
Last Updated 25 ಅಕ್ಟೋಬರ್ 2024, 20:37 IST
<div class="paragraphs"><p>ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಅವರು ಚಿತ್ರಗೀತೆ ಹಾಡಿ ಸಂಭ್ರಮಿಸಿದರು. ಗಾಯಕ ಖಾಸಿಂ ಅಲಿ ಜತೆಯಾದರು. ಮೊಹಮ್ಮದ್‌ ಅವರ ಪುಟಾಣಿ ಮಗ ಅಚ್ಚರಿಯಿಂದ ನೋಡಿದ್ದು ಹೀಗೆ</p></div>

ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಅವರು ಚಿತ್ರಗೀತೆ ಹಾಡಿ ಸಂಭ್ರಮಿಸಿದರು. ಗಾಯಕ ಖಾಸಿಂ ಅಲಿ ಜತೆಯಾದರು. ಮೊಹಮ್ಮದ್‌ ಅವರ ಪುಟಾಣಿ ಮಗ ಅಚ್ಚರಿಯಿಂದ ನೋಡಿದ್ದು ಹೀಗೆ

   

ಚನ್ನಮ್ಮನ ಕಿತ್ತೂರು: ಕಿತ್ತೂರು ವಿಜಯೋತ್ಸವದ 200ನೇ ವರ್ಷಾಚರಣೆಗೆ ಶುಕ್ರವಾರ ತಡರಾತ್ರಿ ವೈಭವದ ತೆರೆ ಬಿದ್ದಿತು. ಬಾಲಿವುಡ್‌ ಖ್ಯಾತ ಗಾಯಕ ಅರ್ಮಾನ್‌ ಮಲೀಕ್‌ ಅವರ ಗಾನಸುಧೆಯ ಮೂಲಕ ಸಾಂಸ್ಕೃತಿಕ ಲೋಕವೊಂದು ನಿರ್ಮಾಣವಾಯಿತು.

ರಾಜ್ಯದ ಎಲ್ಲೆಡೆಯಿಂದ ಸೇರಿದ್ದ ಅಪಾರ ಜನ ಮೂರು ದಿನಗಳ ವೈಭೋಗವನ್ನು ಕಣ್ಣು– ಮನದಲ್ಲಿ ಹಿಡಿದಿಟ್ಟುಕೊಂಡು ಮರಳಿದರು.

ADVERTISEMENT

ದ್ವಿಶತಮಾನೋತ್ಸವಕ್ಕೆ ಜನ ನಿರೀಕ್ಷೆಗೆ ಮೀರಿ ಹರಿದುಬಂದರು. ರಾಣಿ ಚನ್ನಮ್ಮ ಮುಖ್ಯ ವೇದಿಕೆಯಲ್ಲಿ ಬೆಳಗಿನ ಅವಧಿಯಲ್ಲಿ ನಡೆದ ಸಾಹಿತ್ಯ ಗೋಷ್ಠಿಗಳು ಮತ್ತು ಮಧ್ಯಾಹ್ನದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೇಕ್ಷಕರ ಕೊರತೆ ಕಾಡಿತು. ಆದರೆ, ಇಳಿಹೊತ್ತಿನ ನಂತರ ವೇದಿಕೆಯಲ್ಲಿ ಜನರು ಕಿಕ್ಕಿರಿದು ಸೇರಿ, ಸಂಗೀತದ ರಸದೌತಣ ಅನುಭವಿಸಿದರು.

ರಾಣಿ ಚನ್ನಮ್ಮ ವೇದಿಕೆಯಲ್ಲಿ ಶುಕ್ರವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಚಲನಚಿತ್ರ ನಟ ಡಾಲಿ ಧನಂಜಯ ಅವರು, ಟಗರು ಚಿತ್ರದ ಸಂಭಾಷಣೆ ಮೂಲಕ ಪ್ರೇಕ್ಷಕರ ಮನಕ್ಕೆ ಲಗ್ಗೆ ಇಟ್ಟರು. ಬಸವಣ್ಣನ ವಚನದ ಮೂಲಕ ಭಕ್ತಿಯ ಕಡೆಗೂ ಸೆಳೆದರು.

ಗಾಯಕ ಜಸ್‌ಕರಣ್ ಅವರು, ದ್ವಾಪರ ದಾಟುತ ನನ್ನನೆ ಸೇರಲು ಬಂದ ರಾಧಿಕೆ ಗೀತೆ ಮೂಲಕ ಜನರನ್ನು ಸೆಳೆದರೆ, ದಿವ್ಯಾ ರಾಮಚಂದ್ರನ್‌ ಅವರು, 'ಗಿಲ್ಲಕೊ ಶಿವ ಗಿಲ್ಲಕೊ' ಹಾಡು ಹಾಡಿ ರಂಜಿಸಿದರು. ಶರಣ ಮತ್ತು ಸ್ಯಾಂಡಲ್‌ವುಡ್‌ ತಾರೆಯರ ಪ್ರದರ್ಶನಕ್ಕೆ ಪ್ರೇಕ್ಷಕರು ಮನಸೋತರು.

ಅಕ್ಷತಾ ಸಾಂಸ್ಕೃತಿಕ ಕಲಾ ಅಕಾಡೆಮಿಯವರು ಪ್ರಸ್ತುತಪಡಿಸಿದ ನೃತ್ಯರೂಪಕ, ಸವದತ್ತಿಯ ಮೋಹನಗೌಡ ಪಾಟೀಲ ಸಂಗೀತ ಪ್ರತಿಷ್ಠಾನದ ಸುಗಮ ಸಂಗೀತ, ಪುಂಡಲಿಕ ಭಜಂತ್ರಿ ಅವರ ಶಹನಾಯಿ ವಾದನ, ಶಂಕ್ರಣ್ಣ ಕೋತಬಾಳ ಅವರ ಲಾವಣಿ ಪದ, ಅಮರೇಶ್ವರ ಮಹಾರಾಜರ ಡೊಳ್ಳಿನ ಪದಗಳು, ಬೆಂಗಳೂರಿನ ಜಾಹ್ನವಿ ಐತಾಳ ಮತ್ತು ತಂಡದವರ ಹೆಜ್ಜೆನಾದ ಹಾಗೂ ಜೋಗಿಲ ಸಿದ್ದರಾಜು ಅವರ ಜನಪದ ಸಂಗೀತ ಕಾರ್ಯಕ್ರಮ ಜನರ ಮನಸೆಳೆದವು.

ಗಿಚ್ಚಿ ಗಿಲಿಗಿಲಿ ಹಾಗೂ ಮಿಮಿಕ್ರಿ ಗೋಪಿ ತಂಡದವರು ನಡೆಸಿಕೊಟ್ಟ ʼಹಾಸ್ಯಸಂಜೆʼ ಕಾರ್ಯಕ್ರಮ ಸಭಿಕರನ್ನು ನಗೆಗಡಲಲ್ಲಿ ತೇಲಿಸಿತು.

ಪ್ರತಿನಿತ್ಯ ಬೆಳಿಗ್ಗೆ ನಡೆಯುವ ಕಾರ್ಯಕ್ರಮಗಳಿಗೆ ಪ್ರೇಕ್ಷಕರ ಸಂಖ್ಯೆ ಕಡಿಮೆ ಇರುತ್ತಿತ್ತು. ಸಂಜೆ ಆಗುತ್ತಿದ್ದಂತೆ ರಸ್ತೆಗಳೆಲ್ಲ ಕಿತ್ತೂರು ಕೋಟೆ ಆವರಣದ ಕಡೆಗೆ ಹೊರಳುತ್ತಿದ್ದವು. ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ ಸವಿಯಲು ಸಹಸ್ರಾರು ಜನರು ಧಾವಿಸಿ ಬರುತ್ತಿದ್ದರು. ಮುಖ್ಯ ವೇದಿಕೆಯು ಪ್ರೇಕ್ಷಕರಿಂದ ತುಂಬಿ ತುಳುಕಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.