ADVERTISEMENT

ಕಿತ್ತೂರು ವಿಜಯೋತ್ಸವ | ಮೆರವಣಿಗೆ ಭದ್ರತೆಗೆ ಖಾಸಗಿ ತಂಡ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 14:28 IST
Last Updated 23 ಅಕ್ಟೋಬರ್ 2024, 14:28 IST
   

ಚನ್ನಮ್ಮನ ಕಿತ್ತೂರು: ಇಬ್ಬರು ಡಿವೈಎಸ್‌ಪಿ, 9 ಸಿಪಿಐ, 26 ಎಸ್ಐ, 56 ಎಎಸ್ಐ, 500 ಪೊಲೀಸರು, ಡಿಆರ್ ಮತ್ತು ಕೆಎಸ್‌ಆರ್‌ಪಿಯ ತಲಾ ನಾಲ್ಕು ವಾಹನ ತುಕಡಿಗಳು ಈ ಭಾರಿಯ ಚನ್ನಮ್ಮನ ಕಿತ್ತೂರು ಉತ್ಸವದ ಬಂದೋಬಸ್ತ್ ಕೆಲಸವನ್ನು ನಿರ್ವಹಿಸುತ್ತಿವೆ. ಆದರೂ ಬುಧವಾರ ಮೆರವಣಿಗೆ ವೇಳೆ ಖಾಸಗಿ ಭದ್ರತಾ ಪಡೆಯನ್ನು ನಿಯೋಜಿಸಿ, ದುಬಾರಿ ವೆಚ್ಚ ಮಾಡಿದ್ದು ಏಕೆ ಎಂಬ ಪ್ರಶ್ನೆ ಕಿತ್ತೂರಿಗರನ್ನು ಕಾಡುತ್ತಿದೆ.

ಈ ಖಾಸಗಿ ಪಡೆಯು ವಿಜಯಜ್ಯೋತಿ ಬರುವ ಸಮಯದಲ್ಲಿ ರಾಣಿ ಚನ್ನಮ್ಮನ ಪ್ರತಿಮೆ ಎದುರು ಬ್ಯಾರಿಕೇಡ್ ಹಾಕಿಕೊಂಡು ಒಳಗೆ ನಿಂತಿದ್ದರೆ, ಪೊಲೀಸರು ಮತ್ತು ಪೊಲೀಸ್ ಅಧಿಕಾರಿಗಳು ಬ್ಯಾರಿಕೇಡ್ ಹೊರಗೆ ನಿಂತಿದ್ದರು. ಪುತ್ಥಳಿ ಬಳಿಗೆ ತೆರಳಬೇಕೆಂದರೆ ಖಾಸಗಿಯವರು ಅನುಮತಿ ಕೇಳುತ್ತಿದ್ದಾರೆ ಎಂದು ಕೆಲವರು ದೂರಿದರು.

ಆದರೆ, ಈ ಸ್ಥಳಕ್ಕೆ ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಆಗಮಿಸಿದ ನಂತರ ಅವರನ್ನು ಹೊರಗೆ ಕಳುಹಿಸಲಾಯಿತು. ಅಲ್ಲಿ ಪೊಲೀಸ್ ಅಧಿಕಾರಿಗಳನ್ನು ನೇಮಿಸಲಾಯಿತು.

ADVERTISEMENT

ಇಷ್ಟು ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಖಾಸಗಿ ಭದ್ರತಾ ಪಡೆ ನೇಮಿಸಿಕೊಳ್ಳಲಾಗಿದೆ. ಈ ಬಗ್ಗೆ ಯಾವುದೇ ಸಮಿತಿ ಸಭೆಯಲ್ಲೂ ಚರ್ಚೆ ನಡೆದಿಲ್ಲ ಎಂದು ಜನ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.