ಗೋಕಾಕ: ರಾಷ್ಟ್ರೀಯ ಲೋಕ ಅದಾಲತ್ ನಿಮಿತ್ತ ಇಲ್ಲಿನ ನ್ಯಾಯಾಲಯಗಳ ಸಂಕೀರ್ಣದಲ್ಲಿ ಗೋಕಾಕ ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಆಶ್ರಯದಲ್ಲಿ ನಡೆದ ಬೃಹತ್ ಲೋಕ ಅದಾಲತ್ನಲ್ಲಿ 83,145 ವ್ಯಾಜ್ಯ ಪೂರ್ವ ಪ್ರಕರಣ ಸೇರಿ ಒಟ್ಟು 87,312 ವಿವಿಧ ಬಗೆಯ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಯಿತು.
₹ 74.30 ಕೋಟಿ ಮೌಲ್ಯದ ಪರಿಹಾರಗಳು ಕಕ್ಷಿದಾರ-ಫಲಾನುಭವಿಗಳ ಪಾಲಾಗಿವೆ. ದಿನವಿಡೀ ನ್ಯಾಯಾಲಯ ಸಂಕೀರ್ಣ ಕಕ್ಷೀದಾರರಿಂದ ತುಂಬಿಕೊಂಡಿತ್ತು. ಚೆಕ್ ಬೌನ್ಸ್, ರಸ್ತೆ ಅಪಘಾತ ಪರಿಹಾರ ಸೇರಿ ಇನ್ನೂ ಅನೇಕ ಬಗೆಯ ಪ್ರಕರಣಗಳಿಂದ ಮುಕ್ತಿ ಹೊಂದಿದ ಕಕ್ಷಿದಾರರು ಹರ್ಷದಿಂದ ತಮ್ಮ ಊರುಗಳತ್ತ ಹೆಜ್ಜೆ ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರೂ ಆಗಿರುವ ಪ್ರಧಾನ ಹಿರಿಯ ದಿವಾಣಿ ನ್ಯಾಯಾಲಯದ ನ್ಯಾಯಾಧೀಶೆ ದೀಪಾ ಜಿ. ಮತ್ತು ಸಮಿತಿ ಕಾರ್ಯದರ್ಶಿ ಆಗಿರುವ ಪ್ರಧಾನ ದಿವಾಣಿ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ರಾಜೀವ ಗೊಳಸಾರ ಅವರು ಸಂಜೆ ಜಂಟಿಯಾಗಿ ಬಿಡುಗಡೆಗೊಳಿಸಿರುವ ಪತ್ರಿಕಾ ಹೇಳಿಕೆಯಲ್ಲಿ ಈ ವಿವರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.