ಬೆಳಗಾವಿ: ‘ಉಡುಪಿ–ಚಿಕ್ಕಮಗಳೂರು ಕ್ಷೇತ್ರದಲ್ಲಿ ನನ್ನ ವಿರುದ್ಧ ಪಿತೂರಿ ನಡೆದಿದೆ. ಇದರಿಂದ ತೊಂದರೆ ಬದಲು ಒಳ್ಳೆಯದೇ ಆಗಿದೆ. ನಾನು ಏನೆಲ್ಲ ಕೆಲಸ ಮಾಡಿದ್ದೇನೆ ಎಂಬುದು ನಾಯಕರಿಗೆ, ಜನರಿಗೆ ಗೊತ್ತಾಗಿದೆ’ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
‘ಯಾವಾಗ ವಿರೋಧ ವ್ಯಕ್ತವಾಗುವುದೋ, ಆಗಲೇ ನಮ್ಮ ನಾಯಕರು ಮಾಹಿತಿ ಸಂಗ್ರಹಿಸುವರು. ನಮ್ಮ ಕೆಲಸ ಗುರುತಿಸುವರು. ಶೋಭಾಗೆ ಏಕೆ ವಿರೋಧವಿದೆ ಎಂಬ ಸತ್ಯ ಗೊತ್ತಾಗುತ್ತದೆ’ ಎಂದು ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
‘ಬಿಜೆಪಿಯ ಬಹುತೇಕ ಹಾಲಿ ಸಂಸದರಿಗೆ ಟಿಕೆಟ್ ತಪ್ಪುತ್ತದೆ ಎಂದು ನಮ್ಮ ನಾಯಕರು ಎಲ್ಲಿಯೂ ಹೇಳಿಲ್ಲ. ಇದು ಮಾಧ್ಯಮಗಳಲ್ಲಿ ಮಾತ್ರ ಹರಿದಾಡುತ್ತಿದೆ. ಯಾರು ಒಳ್ಳೆಯ ಕೆಲಸ ಮಾಡಿದ್ದಾರೋ, ಅವರಿಗೆ ಟಿಕೆಟ್ ಸಿಗುತ್ತದೆ. ಇದು ಬಿಜೆಪಿಯ ಸೂತ್ರ. ಈ ಸಲವೂ ಬಿಜೆಪಿಗೆ ಅಭಿವೃದ್ಧಿಯೇ ಮಾನದಂಡ’ ಎಂದು ಅವರು ಹೇಳಿದರು.
‘ಚುನಾವಣೆ ಬಂದ ಕಾರಣ ಅಡುಗೆ ಅನಿಲ ಹಾಗೂ ಪೆಟ್ರೋಲ್ ದರ ಇಳಿಸಿಲ್ಲ. ಅನಿಲಗಳ ದರ ವ್ಯತ್ಯಾಸ ವಿದೇಶಿ ಮಾರುಕಟ್ಟೆ ಮೇಲೆ ನಿರ್ಧಾರವಾಗುತ್ತದೆ. ಪೆಟ್ರೋಲಿಯಂ ಉತ್ಪನ್ನಗಳು, ರಸಗೊಬ್ಬರ, ಖಾದ್ಯ ತೈಲದಲ್ಲಿ ನಾವು ಸ್ವಾವಲಂಬಿ ಆಗಿಲ್ಲ. ಹೀಗಾಗಿ ದರ ಏರಿಕೆ– ಇಳಿಕೆ ಸಹಜ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.