ಬೆಳಗಾವಿ: ‘ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಚಿಕ್ಕೋಡಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಹಲವರು ಪ್ರಯತ್ನಿಸುತ್ತಿದ್ದಾರೆ. ಟಿಕೆಟ್ ಸಿಕ್ಕರೆ ನನ್ನ ಪುತ್ರ ಅಮಿತ್ ಸ್ಪರ್ಧಿಸಬಹುದು’ ಎಂದು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.
ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಹಿಂದೆಯೇ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲು ಅಮಿತ್ಗೆ ಆಫರ್ ಇತ್ತು. ಆದರೆ, ಅವನಿಗೆ ಆಸಕ್ತಿ ಇರಲಿಲ್ಲ. ಈಗ ಅವನ ಗೆಳೆಯರೆಲ್ಲರೂ ಸ್ಪರ್ಧಿಸುವಂತೆ ಒತ್ತಡ ಹೇರಿದ್ದಾರೆ. ಟಿಕೆಟ್ ಸಿಕ್ಕರೆ, ಸದ್ಯ ಅವನೂ ಸ್ಪರ್ಧಿಸುವ ಮನಸ್ಸು ಹೊಂದಿದ್ದಾನೆ’ ಎಂದರು.
‘ಬೆಳಗಾವಿಯಿಂದಲೇ ಅಮಿತ್ ಸ್ಪರ್ಧಿಸಬಹುದಲ್ಲವೇ’ ಎಂಬ ಪ್ರಶ್ನೆಗೆ, ‘ಚಿಕ್ಕೋಡಿಯಲ್ಲಿ ನಮ್ಮ ಸಂಪರ್ಕ ಹೆಚ್ಚಿದೆ. ಸಕ್ಕರೆ ಕಾರ್ಖಾನೆಗಳ ಮೂಲಕ ರೈತರ ಒಡನಾಟವಿದೆ. ಹೀಗಾಗಿ ಚಿಕ್ಕೋಡಿಯಿಂದಲೇ ಸ್ಪರ್ಧಿಸಲು ಒಲವು ತೋರಿದ್ದಾನೆ’ ಎಂದರು.
‘ಸಕ್ರಿಯ ರಾಜಕಾರಣದಿಂದ ನೀವು ಹಿಂದೆ ಸರಿಯುತ್ತಿದ್ದೀರಾ’ ಎಂಬ ಪ್ರಶ್ನೆಗೆ, ‘ಎರಡು ವಿಚಾರಕ್ಕೆ ರಾಜಕೀಯ ಮಾಡಬೇಕು. ನಾವೆಲ್ಲ ಮೌಲ್ಯಾಧಾರಿತವಾಗಿ ರಾಜಕೀಯ ಮಾಡಿದವರು. ಈಗ ಆ ರಾಜಕೀಯ ನಡೆಯುತ್ತದೆಯೇ’ ಎಂದು ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.