ಬೆಳಗಾವಿ: ಬೆಳಗಾವಿ: ಭೂ ಪರಿವರ್ತನೆ ಮಾಡಿಕೊಡಲು ₹40 ಸಾವಿರ ಲಂಚ ಪಡೆಯುತ್ತಿದ್ದ ವೇಳೆ, ಬೆಳಗಾವಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹಾಗೂ ಗ್ರೇಡ್–2 ಕಾರ್ಯದರ್ಶಿ ಶುಕ್ರವಾರ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಮರೆಡ್ಡಿ ಪಾಟೀಲ ಹಾಗೂ ಗ್ರೇಡ್–2 ಕಾರ್ಯದರ್ಶಿ ವೈಜನಾಥ ಸನದಿ ಬಂಧಿತರು. ಇಬ್ಬರೂ ಲಂಚದ ಹಣದ ಸಮೇತ ಸಿಕ್ಕಿಬಿದ್ದಿದ್ದಾರೆ ಲೋಕಾಯುಕ್ತ ಎಸ್ಪಿ ಹಣಮಂತರಾಯ ‘ಪ್ರಜಾವಾಣಿ’ಗೆ ತಿಳಿಸಿದರು.
ನಗರದ ಕಾಕತಿವೇಸ್ ಪ್ರದೇಶದ ನಿವಾಸಿ ಶಾನವಾಜ್ಖಾನ್ ಪಠಾಣ (52) ಅವರು ತಮ್ಮ ನಿವೇಶನವನ್ನು ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಇದಕ್ಕಾಗಿ ರಾಮರೆಡ್ಡಿ ₹40 ಸಾವಿರ ಲಂಚ ಕೇಳಿದ್ದರು. ಶಾನವಾಜ್ಖಾನ್ ಅವರನ್ನು ಹಲವು ದಿನಗಳಿಂದ ಪದೇಪದೇ ಕಚೇರಿಗೆ ಅಲೆದಾಡಿಸಿದ್ದರು.
ಶಾನವಾಜ್ಖಾನ್ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಪೂರ್ವ ಯೋಜನೆಯಂತೆ ಶಾನವಾಜ್ಖಾನ್ ಅವರು ಇಲ್ಲಿನ ತಾಲ್ಲೂಕು ಪಂಚಾಯಿತಿ ಕಚೇರಿಗೆ ಬಂದು ಅಧಿಕಾರಿಗಳ ಕೈಗೆ ಲಂಚದ ಹಣ ಕೊಟ್ಟರು. ಆಗ ದಾಳಿ ಮಾಡಿದ ಇನ್ಸ್ಪೆಕ್ಟರ್ ಅನ್ನಪೂರ್ಣ ಹುಲಗೂರು ಅವರು ಆರೋಪಿಗಳನ್ನು ಬಂಧಿಸಿದರು.
‘ಇಬ್ಬರೂ ಆರೋಪಿಗಳ ಮನೆಗಳ ಮೇಲೂ ದಾಳಿ ಮಾಡಿ, ಹುಡುಕಾಟ ನಡೆಸಲಾಗಿದೆ. ಇನ್ನಷ್ಟು ಅಕ್ರಮಗಳು ಹೊರಬೀಳುವ ಸಾಧ್ಯತೆ ಇದೆ. ತನಿಖೆ ಮುಂದುರಿದಿದೆ’ ಎಂದೂ ಹಣಮಂತರಾಯ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.