ಸತ್ತಿಗೇರಿ: ಗ್ರಾಮದಲ್ಲಿ ಅಭಿವೃದ್ಧಿ ಕೆಲಸಕ್ಕೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿ, ಸಮೀಪದ ಸೊಪ್ಪಡ್ಲ ಗ್ರಾಮ ಪಂಚಾಯ್ತಿ ಕಚೇರಿಗೆ ಸದಸ್ಯರು ಶನಿವಾರ ಬೀಗ ಜಡಿದು ಪ್ರತಿಭಟನೆ ನಡೆಸಿದರು.
‘ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಮ್ಮ ಗ್ರಾ.ಪಂಗೆ ಎಷ್ಟು ಮನೆ ಮಂಜೂರಾಗಿವೆ ಎಂದು ಪಿಡಿಒ ವಹೀದಾ ಮುಲ್ಲಾ ಮಾಹಿತಿ ಕೊಡುತ್ತಿಲ್ಲ. ನರೇಗಾ ಯೋಜನೆಯಡಿ ಕೈಗೊಳ್ಳಬೇಕಿರುವ ಕೆಲಸಕ್ಕೆ ಅನುಮತಿ ನೀಡುತ್ತಿಲ್ಲ. ಈ ಬಗ್ಗೆ ಚರ್ಚಿಸಲು ಕಚೇರಿಗೆ ಹೋದರೆ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ’ ಎಂದು ದೂರಿದರು.
ಸವದತ್ತಿ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಆನಂದ ಬಡಕುಂದ್ರಿ ಸ್ಥಳಕ್ಕಾಗಮಿಸಿ ಸಮಸ್ಯೆ ಆಲಿಸಿದರು. ‘ನಿಮ್ಮ ಆರೋಪಗಳ ಪರಿಶೀಲಿಸಿ, ಕ್ರಮ ಜರುಗಿಸಲಾಗುವುದು’ ಎಂದು ಅವರು ಭರವಸೆ ನೀಡಿದ್ದರಿಂದ ಸದಸ್ಯರು ಪ್ರತಿಭಟನೆ ಹಿಂಪಡೆದರು.
ಗ್ರಾ.ಪಂ ಅಧ್ಯಕ್ಷೆ ಸತ್ಯವ್ವ ಗೊರಗುದ್ದಿ, ಸದಸ್ಯರಾದ ಕಿರಣ ಹುಣಶ್ಯಾಳ, ರವಿಕಿರಣ ಪಾಟೀಲ, ಮಹಾದೇವಿ ಕೊಡ್ಲಿವಾಡ, ಸುವರ್ಣ ಹೊಸಮಠ, ಸುನೀತಾ ಕಾಡಮಠ, ಮಹಾದೇವ ಯಡ್ರಾಂವಿ, ಆನಂದ ಬಾಗೋಡಿ, ಹನುಮಂತ ದುರಗನ್ನವರ, ಮಹಾದೇವ ತಳವಾರ, ಸೋಹಿಲ್ ನದಾಫ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.