ADVERTISEMENT

‘ಭಾರತದ ಆರ್ಥಿಕ ಸಾಮರ್ಥ್ಯ ವೃದ್ಧಿ’

ಕೆಎಲ್‌ಇ ಶಾಲೆ ಉದ್ಘಾಟಿಸಿದ ವಿದೇಶಾಂಗ ಸಚಿವ ಡಾ.ಎಸ್‌.ಜೈಶಂಕರ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2024, 15:38 IST
Last Updated 29 ಫೆಬ್ರುವರಿ 2024, 15:38 IST
ಚಿಕ್ಕೋಡಿಯಲ್ಲಿ ಬುಧವಾರ ನಡೆದ ಕೆಎಲ್‌ಇ ಶಾಲೆಯ ಉದ್ಘಾಟನಾ ಸಮಾರಂಭದಲ್ಲಿ ಸಚಿವ ಡಾ.ಎಸ್‌.ಜೈಶಂಕರ್‌ ದೀಪ ಬೆಳಗಿಸಿದರು. ಪ್ರಕಾಶ ಹುಕ್ಕೇರಿ, ಪ್ರಭಾಕರ ಕೋರೆ, ಪ್ರಲ್ಹಾದ್‌ ಜೋಶಿ ಇತರರು ಪಾಲ್ಗೊಂಡರು
ಚಿಕ್ಕೋಡಿಯಲ್ಲಿ ಬುಧವಾರ ನಡೆದ ಕೆಎಲ್‌ಇ ಶಾಲೆಯ ಉದ್ಘಾಟನಾ ಸಮಾರಂಭದಲ್ಲಿ ಸಚಿವ ಡಾ.ಎಸ್‌.ಜೈಶಂಕರ್‌ ದೀಪ ಬೆಳಗಿಸಿದರು. ಪ್ರಕಾಶ ಹುಕ್ಕೇರಿ, ಪ್ರಭಾಕರ ಕೋರೆ, ಪ್ರಲ್ಹಾದ್‌ ಜೋಶಿ ಇತರರು ಪಾಲ್ಗೊಂಡರು   

ಚಿಕ್ಕೋಡಿ: ‘ಅನ್ನ ಯೋಜನೆ, ಮುದ್ರಾ, ಉಜ್ವಲ, ಆವಾಸ್, ಡಿಜಿಟಲೀಕರಣ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಭಾರತ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಮುಂದಿನ ದಿನಗಳಲ್ಲಿ ನಂಬರ್‌ ಒನ್ ಆರ್ಥಿಕ ಶಕ್ತಿ ಆಗಿ ಹೊರ ಹೊಮ್ಮಲಿದೆ’ ಎಂದು ವಿದೇಶಾಂಗ ಸಚಿವ ಡಾ.ಎಸ್‌.ಜೈಶಂಕರ್‌ ಹೇಳಿದರು.

ಪಟ್ಟಣದಲ್ಲಿ ಬುಧವಾರ ಕೆಎಲ್ಇ ಸಂಸ್ಥೆಯ (ಸಿಬಿಎಸ್‍ಇ) ಶಾಲೆ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ‘ಭಾರತ ಜಾಗತಿಕವಾಗಿ ಕೋವಿಡ್‌ ಎದುರಿಸುವುದು ದುಸ್ತರ ಎಂದು ಅನೇಕ ಪ್ರಗತಿಶೀಲ ದೇಶಗಳು ಹೇಳಿದ್ದವು. ಆದರೆ, ಮಾರಕ ಕೋವಿಡ್‌ಗೆ ಜಗತ್ತಿನಲ್ಲೇ ಮೊದಲ ಬಾರಿಗೆ ಲಸಿಕೆ ಕಂಡುಹಿಡಿದು, ನೂರಕ್ಕೂ ಹೆಚ್ಚು ದೇಶಗಳಿಗೂ ಸರಬರಾಜು ಮಾಡಿದ್ದೇವೆ’ ಎಂದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ‘ಜಗತ್ತಿನಲ್ಲಿ ಇಷ್ಟು ದಿನಗಳ ಕಾಲ ಭಾರತದ ಧ್ವನಿ ಕ್ಷೀಣವಾಗಿತ್ತು. ವಿದೇಶಾಂಗ ನೀತಿಯಲ್ಲಿ ನರೇಂದ್ರ ಮೋದಿ ಅವರ ಸೂತ್ರಗಳನ್ನು ವಿದೇಶಾಂಗ ಸಚಿವ ಜೈಶಂಕರ ಅವುಗಳನ್ನು ಅನುಷ್ಠಾನ ಮಾಡಿದರು. ಪರಿಣಾಮ ಜಗತ್ತು ಇಂದು ನಮ್ಮನ್ನು ನೋಡುವ ದೃಷ್ಟಿಯೇ ಬದಲಾಗಿದೆ’ ಎಂದರು.

ADVERTISEMENT

‘ನಾನೂ ಕೆಎಲ್‌ಇ ಸಂಸ್ಥೆಯ ವಿದ್ಯಾರ್ಥಿ. ಕೆಎಲ್‌ಇ ಕಾಲೇಜಿನ ಮೂಲಕ ಪದವಿ ಪಡೆದವನು. ಅಂದರೆ ಕೆಎಲ್‌ಇ ಸಂಸ್ಥೆಯು ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ್ದರ ಫಲವಾಗಿ ಅಸಂಖ್ಯ ವಿದ್ಯಾರ್ಥಿಗಳ ಬದುಕು ಅರಳಿದೆ’ ಎಂದರು.

ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಮಾತನಾಡಿ, ‘ಮಹಾ ದಾನಿಗಳಿಂದ ಬೆಳೆದು ನಿಂತಿರುವ ಸಂಸ್ಥೆ ಜಾಗತಿಕವಾಗಿ ವಿಸ್ತಿರಿಸಿದೆ. ಶಿಕ್ಷಣ, ಆರೋಗ್ಯ, ಸಂಶೋಧನೆಯಲ್ಲಿ ಮುಂಚೂಣಿಯಲ್ಲಿದೆ. ಆಲೋಪತಿ, ಆಯುರ್ವೇ, ಹೋಮಿಯೋಪಥಿ ಚಿಕಿತ್ಸೆಗಳ ಮೂಲಕ 4500 ಹಾಸಿಗೆಗಳ ಬೃಹತ್ ಆರೋಗ್ಯ ಜಾಲ ಹೊಂದಿದೆ’ ಎಂದರು.

ಉಪ ವಿಭಾಗಾಧಿಕಾರಿ ಮಹಿಬೂಬಿ, ಪುರಸಭೆ ಸದಸ್ಯರಾದ ಜಗದೀಶ ಕವಟಗಿಮಠ, ಪ್ರವೀಣ ಕಾಂಬಳೆ, ಸಂಜಯ ಕವಟಗಿಮಠ. ವಿಶ್ವನಾಥ ಕಾಮಗೌಡ, ನಾಗರಾಜ ಮೇದಾರ, ವಿಜಯ ಭಾಸ್ಕರ, ತಾನಾಜಿ ಕದಂ, ಆದಂ ಗಣೇಶವಾಡಿ, ಸಿದ್ದಪ್ಪ ಡಂಗೇರ ಅವರು ಸಿವ ಜೈಶಂಕರ್ ಅವರನ್ನು ಸನ್ಮಾನಿಸಲಾಯಿತು.

ಕೆಎಲ್‍ಇ ಸಂಸ್ಥೆಯ ನಿರ್ದೇಶಕರಾದ ಡಾ.ವಿ.ಎಸ್. ಸಾಧುನವರ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ–2 ಪ್ರಕಾಶ ಹುಕ್ಕೇರಿ, ಸಂಸ್ಥೆ ಕಾರ್ಯದರ್ಶಿ ಡಾ.ಬಿ.ಜಿ.ದೇಸಾಯಿ, ಬಿ.ಜಿ. ದೇಸಾಯಿ, ಚಿಕ್ಕೋಡಿ ಪುರಸಭೆ ಮಾಜಿ ಅಧ್ಯಕ್ಷ ಪ್ರವೀಣ ಕಾಂಬಳೆ ವೇದಿಕೆ ಮೇಲಿದ್ದರು. ಗಂಗಾ ಅರಬಾಂವಿ ನಿರೂಪಿಸಿದರು. ಕೆಎಲ್‍ಇ ಸಂಸ್ಥೆಯ ಸಿಬಿಎಸ್‍ಇ ಶಾಲೆಯ ಪ್ರಾಚಾರ್ಯ ಚೇತನ ಅಲವಾಡೆ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.