ಬೆಳಗಾವಿ: 'ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಈಗ ಖಾಲಿ ಇಲ್ಲ. ಹೊಸ ಮುಖ್ಯಮಂತ್ರಿ ನೇಮಕದ ಚರ್ಚೆಯೇ ಈಗ ಅನಾವಶ್ಯಕ' ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ ಮಹದೇವಪ್ಪ ಹೇಳಿದರು.
ಮುಖ್ಯಮಂತ್ರಿ ಸ್ಥಾನವನ್ನು ಡಿ.ಕೆ.ಶಿವಕುಮಾರ್ ಅವರಿಗೆ ಬಿಟ್ಟುಕೊಡುವ ಕುರಿತು ಸ್ವಾಮೀಜಿಗಳು ನೀಡಿದ ಹೇಳಿಕೆ ವಿಚಾರವಾಗಿ, ಇಲ್ಲಿ ಭಾನುವಾರ ಸುದ್ದಿಗಾರರಿಗೆ ಅವರು ಹೀಗೆ ಪ್ರತಿಕ್ರಿಯಿಸಿದರು.
'ಐದು ವರ್ಷ ಅಧಿಕಾರ ನಡೆಸುವಂತೆ ಕಾಂಗ್ರೆಸ್ಗೆ ಜನರು ಅಧಿಕಾರ ನೀಡಿದ್ದಾರೆ. ಪಕ್ಷದ ಹೈಕಮಾಂಡ್ನವರು ವೀಕ್ಷಕರನ್ನು ಕಳುಹಿಸಿ, ಎಲ್ಲ ಶಾಸಕರ ಅಭಿಪ್ರಾಯ ಆಧರಿಸಿಯೇ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಸಿ.ಎಂ ನೇಮಕದ ಸಂದರ್ಭ ಪಕ್ಷದ ವರಿಷ್ಠರು ಏನೇನು ಚರ್ಚಿಸಿದ್ದರು ಎಂಬುದನ್ನು ಬಹಿರಂಗಪಡಿಸಲಾಗದು' ಎಂದರು.
'ಲೋಕಸಭಾ ಚುನಾವಣೆ ಸಂದರ್ಭ ಜಾತಿವಾರು ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿ ಕುರಿತು ಚರ್ಚೆ ನಡೆದಿತ್ತು. ಅದನ್ನು ಪಕ್ಷದ ಹೈಕಮಾಂಡ್ ತೀರ್ಮಾನಿಸುತ್ತದೆ. ಪಕ್ಷದ ಹಿತದೃಷ್ಟಿಯಿಂದ ಇದು ಆಂತರಿಕವಾಗಿ ಚರ್ಚೆಯಾಗಬೇಕು' ಎಂದ ಅವರು, 'ದೆಹಲಿಯಲ್ಲಿ ಪಕ್ಷದ ಹೈಕಮಾಂಡ್ ಎದುರು ಸಿ.ಎಂ ಹಾಗೂ ಡಿಸಿಎಂ ಹುದ್ದೆಗಳ ಸೃಷ್ಟಿ ವಿಚಾರ ಚರ್ಚೆ ಆಗಿಲ್ಲ. ಅಭಿವೃದ್ಧಿ, ಪಕ್ಷ ಸಂಘಟನೆ ವಿಚಾರವಾಗಿ ಚರ್ಚೆ ನಡೆದಿದೆ' ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.