ADVERTISEMENT

ಬಾಣಂತಿ, ಮಗು ಸಾವು: ನಿರ್ಲಕ್ಷ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2024, 13:27 IST
Last Updated 18 ಮಾರ್ಚ್ 2024, 13:27 IST
   

ಬೆಳಗಾವಿ: ತಾಲ್ಲೂಕಿನ ಕಿಣಯೇ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭಾನುವಾರ ಮಧ್ಯರಾತ್ರಿ ಹೆರಿಗೆ ಬಳಿಕ ತೀವ್ರ ರಕ್ತಸ್ರಾವದಿಂದ ಬಾಣಂತಿ, ಉಸಿರಾಟ ಸಮಸ್ಯೆಯಿಂದ ಮಗು ಜಿಲ್ಲಾಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಸಂತಿಬಸ್ತವಾಡ ಗ್ರಾಮದ ಲಕ್ಷ್ಮಿ ಲಗಮಣ್ಣ ಹಳ್ಳಿ(28) ಮೃತರು.

‘ನನ್ನ ಪತ್ನಿ ಸಾವಿಗೆ ಆರೋಗ್ಯ ಕೇಂದ್ರದ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ. ನಾವು ಆಸ್ಪತ್ರೆಗೆ ಹೋದಾಗ, ವೈದ್ಯರು ಇರಲಿಲ್ಲ. ಶುಶ್ರೂಷಾಧಿಕಾರಿ ಹೆರಿಗೆ ಮಾಡಿಸಿದರು. ಆರೋಗ್ಯ ಸ್ಥಿತಿ ಬಿಗಡಾಯಿಸಿದಾಗ, ಸಕಾಲಕ್ಕೆ ಆಂಬುಲೆನ್ಸ್ ಬಂದಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು’ ಎಂದು ಪತಿ ಲಗಮಣ್ಣ ಒತ್ತಾಯಿಸಿದರು.

ನಿರ್ಲಕ್ಷ್ಯ ಆಗಿಲ್ಲ: ‘ಮಧ್ಯರಾತ್ರಿ 1.30ಕ್ಕೆ ಲಕ್ಷ್ಮಿ ಹೆರಿಗೆಗೆ ದಾಖಲಾದರು. 2.30ಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಅವರಿಗೆ ತೀವ್ರ ರಕ್ತಸ್ರಾವವಾಯಿತು. ಮಗು ಅಳಲಿಲ್ಲ. ಇಬ್ಬರನ್ನೂ ಬೇರೆ ಬೇರೆ ವಾಹನಗಳಲ್ಲಿ ಜಿಲ್ಲಾಸ್ಪತ್ರೆಗೆ ಸಾಗಿಸಲು ಸಿಬ್ಬಂದಿ ಯತ್ನಿಸಿದರು. ಇದರಲ್ಲಿ ವೈದ್ಯರು, ಸಿಬ್ಬಂದಿಯ ನಿರ್ಲಕ್ಷ್ಯ ಆಗಿಲ್ಲ. ಆದರೂ, ಕುಟುಂಬಸ್ಥರ ದೂರಿನ ಅನ್ವಯ ಪರಿಶೀಲಿಸುತ್ತೇವೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಂಜಯ ಡುಮ್ಮಗೋಳ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.