ಸವದತ್ತಿ: ತಾಲ್ಲೂಕಿನ ಆಚಮಟ್ಟಿ ಗ್ರಾಮದ ಜಮೀನಿನ ವಿವಾದದ ಕುರಿತು ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ 6ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಇಬ್ಬರು ಆರೋಪಿಗಳಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ ತಲಾ ₹50 ಸಾವಿರ ದಂಡ ವಿಧಿಸಿ ಶನಿವಾರ ತೀರ್ಪು ನೀಡಿದೆ.
ಆರೋಪಿಗಳಾದ ಆಚಮಟ್ಟಿ ಗ್ರಾಮದ ಓಂಕಾರಗೌಡ ಪಕ್ಕೀರಗೌಡ ಮೇಲಿನಮನಿ ಉರ್ಫ್ ಪಾಟೀಲ ಹಾಗೂ ದ್ಯಾಮನಗೌಡ ಪಕ್ಕೀರಗೌಡ ಮೇಲಿನಮನಿ ಉರ್ಫ್ ಪಾಟೀಲ, ಜಮೀನಿನ ಕುರಿತು ಮಕ್ಕಳಿಲ್ಲದ ತಮ್ಮ ಚಿಕ್ಕಪ್ಪ ಈರನಗೌಡ ರುದ್ರಗೌಡ ಮೇಲಿನಮನಿ ಉರ್ಫ್ ಪಾಟೀಲ (45) ಅವರನ್ನು ಕೊಲೆ ಮಾಡಿದ್ದರು.
ಮೃತ ಈರನಗೌಡ ಅವರ ಪತ್ನಿ ಶ್ರೀದೇವಿ, ಆರೋಪಿಗಳು ತಮ್ಮನ್ನು ಕೊಲೆ ಮಾಡಲು ಹಾಗೂ ಪುರಾವೆ ನಾಶ ಪಡಿಸಲು ಯತ್ನಿಸಿದ್ದರೆಂದು ಸವದತ್ತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ತನಿಖೆ ನಡೆಸಿದ ಇಲಾಖೆ ಆರೋಪಿಗಳ ಮೇಲೆ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ನ್ಯಾಯಾಧೀಶ ಎಚ್.ಎಸ್.ಮಂಜುನಾಥ ತೀರ್ಪು ನೀಡಿದ್ದಾರೆ. ಪಿಎಸ್ಐ ಶಿವಾನಂದ ಗುಡಗನಟ್ಟಿ ದಾಖಲಾಧಿಕಾರಿಯಾಗಿ, ಸಿಪಿಐ ಮಂಜುನಾಥ ನಡುವಿನಮನಿ ತನಿಖಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.